Friday, 18 October 2013

ಕಥೆಯೊಂದು ಮೊಳೆತು....



ಕಾಯಿ
"ಇಲ್ಲಿ ಅಶ್ಲೀಲ ಶಬ್ದಗಳನ್ನು ಬರೆಯಬಾರದು" ಬಸ್ ನಿಲ್ದಾಣದ ಹೆಸರು ಮಳೆ, ಬಿಸಿಲು, ಗಾಳಿಗೆ ಸಿಕ್ಕಿ ಎಂದೋ ಅಳಿಸಿಹೋಗಿ ಒಳಗೋಡೆಯ ಮೇಲೆ ದೊಡ್ಡದಾಗಿ ಕಪ್ಪಕ್ಷರಗಳಲ್ಲಿ ಬರೆದ ಈ ವಾಕ್ಯವಷ್ಟೆ ತೋರುತ್ತಿತ್ತು. ಅದಕ್ಕೆ ಪ್ರತ್ಯುತ್ತರವೆಂಬಂತೆ ಹಲವು ಉದಯೋನ್ಮುಖ ಪ್ರೇಮಿಗಳು ಬಣ್ಣದ ಕಲ್ಲಿನಿಂದ ಬರೆದ ವಾಕ್ಯಗಳೂ ಗೋಡೆಯನ್ನು ಅಲಂಕರಿಸಿದ್ದವು. ಆದರೆ ಈ ದಾರಿಯಲ್ಲಿ ತಿರುಗಾಡುವ ಎಲ್ಲರಿಗೂ ಅದು ಚಾಂದ್ರಾಣಿ ನಿಲ್ದಾಣವೆಂಬುದು ತಿಳಿದಿದೆ. ಚಂದಾವರ ಟೆಂಪೋದ ಕೊನೆಯ ಸಾಲಿನ ಕಿಟಕಿ ಪಕ್ಕದ ಸೀಟಿನಲ್ಲಿ ತನ್ನನ್ನು ತಾನು ತುರುಕಿಕೊಂಡು ಕುಳಿತಿದ್ದ ಕುಟ್ಣಪ್ಪ ನಾಯ್ಕ ಟೆಂಪೋ ಅಲ್ಲಿ ನಿಲ್ಲುತ್ತಲೆ ಆ ಗೋಡೆಯನ್ನೊಮ್ಮೆ ಪರಿಶೀಲಿಸಿದ. ದಿನವೂ ಇದೇ ದಾರಿಯಲ್ಲಿ ಕಾಲೇಜಿಗೆ ಹೋಗುವ ಹಾಗೂ ಚಾಂದ್ರಾಣಿಯಲ್ಲಿ ಬಹಳಷ್ಟು ಸ್ನೇಹಿತರನ್ನಿಟ್ಟುಕೊಂಡಿರುವ ತನ್ನ ಮಗ ಮಹೇಶನೂ ಈ ಗೋಡೆಯ ಮೇಲೆ ತನ್ನ ಪ್ರತಿಭೆಯನ್ನು ತೋರಿದ್ದಾನೋ ಎಂಬುದು ಆತನ ಅನುಮಾನವಾಗಿತ್ತು. ಅಂಥದ್ದೇನೂ ಕಣ್ಣಿಗೆ ಬೀಳದೆ "ಛೆ, ನನ್ನ ಮಗ ಇಂತ ಕೆಲಸವನ್ನೆಲ್ಲ ಮಾಡುವವನಲ್ಲ. ನನಗ್ಯಾಕೆ ಹೀಗೆಲ್ಲ ಅನ್ನಿಸುತ್ತದೆ?" ಎಂದು ತನಗೆ ತಾನೆ ಸಮಾಧಾನ ಹೇಳಿಕೊಂಡ. ಟೆಂಪೋ ಮುಂದಕ್ಕೋಡಿತು. ಸ್ವಲ್ಪವೇ ಮುಂದಕ್ಕೆ ಶಿಲೆಯನ್ನು ಕುಟ್ಟಿ ಪುಡಿಮಾಡುವ ಜಲ್ಲಿ ಮಷೀನೊಂದು ಎದುರಾಗುತ್ತದೆ. ಅದು ತನ್ನ ಅವಾಜು ನಿಲ್ಲಿಸಿ ಹಾಳುಬಿದ್ದು ಎಷ್ಟೋ ಕಾಲವಾಯಿತು. ಆದರೆ ಕುಟ್ಣಪ್ಪನಿಗೆ ಅದೇಕೋ ಪ್ರತೀ ಬಾರಿ ಆ ಜಾಗದಿಂದ ಹಾಯ್ದಾಗಲೂ "ಈ ಮಿಶನ್ನು ಕೆಲಸ ಮಾಡಬೇಕಾಗಿತ್ತು, ಫ್ಯಾಕ್ಟರಿ ನಡೆಯಬೇಕಾಗಿತ್ತು" ಅನಿಸುತ್ತದೆ. ಇಂದೂ ಕೂಡ ಹಾಗೇ ಅಂದುಕೊಂಡ.
            ಭಾಸ್ಕೇರಿ ಹೊಳೆಯ ಬದಿಯಲ್ಲಿರುವ ದೊಡ್ಡಹಿತ್ತಲಿನವ ಈ ಕುಟ್ಣಪ್ಪ ನಾಯ್ಕ. ತೆಂಗಿನಕಾಯಿ, ಅಡಿಕೆಗೊನೆ, ಮುಂತಾದವುಗಳನ್ನು ಕೊಯ್ಯುವ ಮರಕಸುಬು ಹುಟ್ಟಿನಿಂದ ಬಂದಿಲ್ಲವಾಗಿತ್ತಾದರೂ ನೋಡುವವರಿಗೆ ಇವನೇನು ಮರದ ಮೇಲೇ ಹುಟ್ಟಿದ್ದನೋ ಅನಿಸುವಷ್ಟು ಸಲೀಸು. ಹಗಲಿನಲ್ಲಿ ಒಡೆಯರು ಕರೆದು ಕೊಯ್ಲಿನ ಕೆಲಸಕ್ಕೆ ಹೋದರೆ ರಾತ್ರಿ ಕರೆಯದಿದ್ದರೂ ಕೆಲಸಕ್ಕೆ ಹೋಗುತ್ತಾನೆ. ಆದರೆ ರಾತ್ರಿ ಹೋಗುವುದು ಅಪರೂಪಕ್ಕೊಮ್ಮೆ ಅಷ್ಟೆ. ಕಳ್ಳತನವನ್ನಾದರೂ ಒಂದು ಆತ್ಮಸಾಕ್ಷಿಯೊಂದಿಗೆ ಮಾಡಬೇಕೆಂಬುದು ತನ್ನ ಅರಿವಿಗೆ ಬಾರದೆ ಅವನು ಪಾಲಿಸಿಕೊಂದು ಬಂದ ಸಿದ್ಧಾಂತ. ಸಿಕ್ಕಿಬೀಳುತ್ತೇನೆಂಬ ಭಯವೂ ಸ್ವಲ್ಪ ಇತ್ತೆನ್ನಿ. ಇಬ್ಬರು ಗಂಡುಮಕ್ಕಳು. ಹಿರಿಯವನಾದ ಮಹೇಶ ಹೊನ್ನಾವರದ ಐಟಿಐ ಕಾಲೇಜಿಗೆ ಮೂರು ವರ್ಷ ಹೋಗಿಬಂದುಮುಗಿಸಿ ಮನೆಯಲ್ಲಿ ಕೂತಿದ್ದಾನೆ. ಕಿರಿಯ ದಿನೇಶ ಸಂತೆಗುಳಿ ಶಾಲೆಯಲ್ಲಿ ಐದನೇ ತರಗತಿ.
            ಮಗ ಮಹೇಶನಿಗೆ ಕೇವಲ ತನ್ನ ಮಾರ್ಕ್ಸ್ ಕಾರ್ಡು ತೋರಿಸುವುದರಿಂದ ಕೆಲಸ ಸಿಗುವುದಿಲ್ಲ ಎಂಬುದು ಅರಿವಾಗಿತ್ತು. ಸಾಕಷ್ಟು ತಿರುಗಾಡಿ ಚಪ್ಪಲಿ ಸವೆಸಿದ ನಂತರ ಒಂದು ದಿನ ಮೂವತ್ತು ಸಾವಿರ ರೂಪಾಯಿ ಕೊಟ್ಟಲ್ಲಿ ಕೆಲಸ ಗ್ಯಾರಂಟಿ ಎಂದು ಕಾರವಾರದ ಯಾವುದೋ ಏಜನ್ಸಿಯವರು ಹೇಳಿದ್ದರು. ಮಾಡಲು ಕೆಲಸವಿಲ್ಲದೆ ಮನೆಯಲ್ಲಿ ಪುಕ್ಸಟ್ಟೆ ತಿನ್ನುತ್ತಾ ಕೂತ ಮಗನನ್ನು ನೋಡಿ ನೋಡಿ ಸಿಟ್ಟೋ, ಕನಿಕರವೋ, ಏನೋ ಒಂದು ಬಂದು ಸೀದ ಹೊನ್ನಾವರಕ್ಕೆ ಹೋಗಿ ಶೆಟ್ಟರ ಗಿರವಿ ಅಂಗಡಿಯಲ್ಲಿ ತನ್ನ ಹೇಂಡತಿಯ ಆಪರ್ಧನವಾದ ಕೆಲವೇ ಕೆಲವು ಒಡವೆಗಳನ್ನು ಒತ್ತೆಯಿಟ್ಟು ದುಡ್ಡು ತೆಗೆದುಕೊಂಡ ಕುಟ್ಣಪ್ಪ ಈ ಟೆಂಪೊವನ್ನು ಹತ್ತಿದ್ದ. ಆದರೆ ಸುಡುಗಾಡು ಸರ, ಬಳೆ ಜೋಡಿಗೆ ಸಿಕ್ಕಿದ್ದೆಷ್ಟು? ಬರೀ ಇಪ್ಪತ್ತು ಸಾವಿರ.  ಇನ್ನೂ ಹತ್ತು ಸಾವಿರ ಒಟ್ಟುಮಾಡಬೇಕಿತ್ತು. ಪಕ್ಕದ ಮನೆಯ ರಾಮನಾಯ್ಕನನ್ನು ಕೇಳುವುದು. ಹೇಗಾದರೂ ಅವನ ಮಗ ಗೋವಾದಲ್ಲಿ ಯಾವುದೋ ಕೆಲಸ ಮಾಡುತ್ತಿದ್ದಾನೆ. ಅದಕ್ಕೂ ಮೊದಲು ದಾರಿಯಲ್ಲೇ ಸಿಗುವ ಒಡೆಯ ಶಂಕರ ಹೆಗಡೇರ ಬಳಿಯೊಮ್ಮೆ ಕೇಳಿಬಿಡೋಣ ಎಂದುಕೊಂಡಿದ್ದ.
            ಮಳೆನೀರಿಗೆ ಜಂಗು ಹಿಡಿಯಬಾರದೆಂದು ಕೆಂಪು, ನೀಲಿ ಆಯಿಲ್ ಪೇಂಟು ಬಳಿಸಿಕೊಂಡು ನಿಂತಿದ್ದ ಕಬ್ಬಿಣದ ಗೇಟನ್ನು ಕುಟ್ಣಪ್ಪ ತಳ್ಳುತ್ತಿದ್ದಂತೆ ಹೆಗಡೇರ ಮನೆ ನಾಯಿ ದೊಡ್ಡ ಸ್ವರದಲ್ಲಿ ಬೊಗಳಲಾರಂಭಿಸಿತು. ಮನೆಮುಂದಿನ ತೋಟಕ್ಕೆ ಕವಳದ ಎಲೆ ಕೊಯ್ಯಲೆಂದು ಬಂದಿದ್ದ ಶಂಕರ ಹೆಗಡೆ ಗೇಟಿನತ್ತ ದೃಷ್ಟಿ ಹಾಯಿಸಿ "ಅರೆ! ಕುಟ್ಣಪ್ಪ. ಏನು ಇತ್ಲಾಗೆ ಬಂದಿದ್ದು? ಕಾಯಿ ಕೊಯ್ಯ್ಲಿಕ್ಕೇನು ಹೇಳಿಕಳಿಸಿದಹಾಗೆ ಇಲ್ಲವಲ್ಲ?" ಕೇಳಿದರು. "ಇಲ್ರ ವಡೆಯ. ಬೇರೆ ಕೆಲಸ ಇತ್ತು, ಅದ್ಕೆ ಬಂದೆ" ಗೇಟಿನ ಚಿಲಕವನ್ನೆಳೆಯುತ್ತ ಹೇಳಿದ ಕುಟ್ಣಪ್ಪ. "ಓಹೋ, ಬಾ ಬಾ. ಸಮಾ ಟೈಮಿಗೆ ಬಂದಿದ್ದೀಯ. ನಿನಗೂ ಒಂದು ಚಾ ಮಾಡಿಸಿಬಿಡುವ" ಎಂದು "ಇವಳೇ, ಕುಟ್ಣಪ್ಪ ಬಂದಿದ್ದಾನೆ. ಅವನಿಗೂ ಒಂದು ಚಾ." ಹೆಂಡತಿಯನ್ನು ಕೂಗಿ ಹೇಳಿದರು ಹೆಗಡೇರು. ಅದು ಇದು ಊರಮೇಲಿನ ಸುದ್ದಿಯೊಂದಿಗೆ ಚಹಾಸೇವನೆಯಾಗಿ ಇಬ್ಬರ ಬಾಯಲ್ಲೂ ಒಂದೊಂದು ಕವಳ ಬಿದ್ದಾದನಂತರ ವಿಷಯಕ್ಕೆ ಬಂದ ಕುಟ್ನಪ್ಪ "ಸ್ವಲ್ಪ ದುಡ್ಡು ಬೇಕಾಗಿತ್ತಲ್ರ ವಡೆಯ" ಎಂದ. ಹೆಗಡೇರು ಕೇಳಿದರು, "ಸ್ವಲ್ಪ ಅಂದರೆ ಎಷ್ಟು? ನಿನಗೆ ಕೊಡಲಿಕ್ಕಾಗುವುದಿಲ್ಲ ಹೇಳಲಿಕ್ಕಾಗುವುದಿಲ್ಲ". "ಸ್ವಲ್ಪ ಎಂದರೆ ಸ್ವಲ್ಪ ಹೆಚ್ಚೇ ಬೇಕು. ಒಂದು ಹತ್ತು ಸಾವಿರ" ಸುತ್ತಿ ಬಳಸದೆ ನೇರವಾಗಿ ಹೇಳಿಬಿಟ್ಟ ಕುಟ್ಣಪ್ಪ. "ಥೋ! ಅಷ್ಟೆಲ್ಲ ಎಲಿಂದ ತರೂದೋ ಈಗ? ಕಷ್ಟಕ್ಕೆ ಬಂತಲ್ಲ" ಕಪಾಟಿನೊಳಗೆ ಇದ್ದರೂ ಅಷ್ಟೊಂದು ಹಣವನ್ನು ಕೆಲಸದವನೊಬ್ಬನಿಗೆ ಕೊಡಲು ಒಮ್ಮೆ ಹಿಂದೇಟು ಹಾಕಿದರು. ಆದರೆ ಅವರಿಗೆ ಕುಟ್ಣಪ್ಪ ಹಿಡಿದ ಪಟ್ಟನ್ನು ಅಷ್ಟು ಸುಲಭವಾಗಿ ಬಿಡುವ ಆಸಾಮಿಯಲ್ಲವೆಂಬುದು ಗೊತ್ತಿತ್ತು. ಹಾಗೇ ಕುಟ್ಣಪ್ಪನೊಬ್ಬನೇ ತಮಗೆ ಬೇಕಾದ ಸಮಯದಲ್ಲಿ ಇಲ್ಲವೆನ್ನದೆ ಕೆಲಸಕ್ಕೆ ಬಂದವನು ಎಂಬ ಅರಿವೂ ಇತ್ತು. ಕೆಲಹೊತ್ತು ಆಲೋಚಿಸಿದವರಂತೆ ನಟಿಸಿ "ತಿಂಗಳೊಳಗೆ ವಾಪಸ್ ಮಾಡಬೇಕು ಹಾಂ?" ಎನ್ನುತ್ತ ಕೋಣೆಯ ಒಳಹೊಕ್ಕರು.
            ದುಡ್ಡಿನ ವ್ಯವಸ್ಥೆಯಾಗಿಬಿಟ್ಟಿತು. ಇನ್ನು ಮಗನನ್ನು ಕಾರವಾರಕ್ಕೆ ಕಳಿಸುವುದೊಂದೇ ಬಾಕಿ. ಮಗ ಅನ್ನುವವನು ಹೆತ್ತವರನ್ನು ಸಾಕಲು ಯೋಗ್ಯನೋ ಎಂಬುದು ತಿಳಿದುಬಿಡುತ್ತದೆ ಎಂದೆಲ್ಲ ಯೋಚಿಸುತ್ತ ಕುಟ್ಣಪ್ಪ ರಸ್ತೆಯಲ್ಲಿ ನಡೆದುಬರುತ್ತಿದ್ದಾಗಲೇ ಉಮೇಶ ಭಟ್ಟರು ಎದುರಾದರು. ಅವನನ್ನು ಕಂಡದ್ದೇ ಅಂದರು, "ನಾಳೆ ಒಂದೇ ದಿನ ಬಂದು ನಮ್ಮನೆ ಕಾಯಿ ಕೊಯ್ಲು ಮುಗಿಸಿಕೊಟ್ಟು ಹೋಗು ಮಾರಾಯಾ". ಕುಟ್ಣಪ್ಪನಿಗೆ ಗೊತ್ತಿದೆ, ಭಟ್ಟರು ಪೂರ್ತಿ ಕೂಲಿ ದುಡ್ಡನ್ನು ಯಾವತ್ತೂ ಕೊಟ್ಟವರಲ್ಲ. ಏನೋ ಒಂದು ಕಾರಣ ಹೇಳಿ ಸಾಗಹಾಕಿಬಿಡುತ್ತಾರೆ. ದಿನಕಳೆದಂತೆ ಅದು ತನಗೂ ಮರೆತುಹೋಗುತ್ತದೆ. ಆದರೂ ಹೋಗದೆ ಬೇರೆ ಉಪಾಯವಿಲ್ಲ. ಏಕೆಂದರೆ ನಾಳೆ ಬೇರೆ ಎಲ್ಲೂ ಕರೆಯವಿಲ್ಲ. "ಆಯ್ತು ಭಟ್ಟರೆ, ಕೊಯ್ದುಕೊಡುವ. ನಾಳೆ ಒಂದೇ ದಿನ." ಎನ್ನುತ್ತ ಹೆಗಡೇರ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಕವಳವನ್ನು ಬಾಯಲ್ಲಿಟ್ಟ.
            ಎಂದೂ ಇಷ್ಟವಾಗದ ತನ್ನ ಹೆಂಡತಿಯ ಅಡಿಗೆ ಅದೇಕೋ ಕುಟ್ಣಪ್ಪನಿಗೆ ಇಂದು ಇಷ್ಟವಾಯಿತು. ಅದೂ ರಾತ್ರಿ ಊಟಕ್ಕೆಂದು ಬೇರೆ ಮಾಡಿದ್ದಲ್ಲ, ಮಧ್ಯಾಹ್ನದ ತಂಗಳೇ. ಎರಡು, ಮೂರನೇ ಸಲ ಅನ್ನ ಹಾಕಿಸಿಕೊಂಡು ಉಣ್ಣುತ್ತಿರುವ ತನ್ನ ಗಂಡನನ್ನು ನೋಡಿ ಸಾವಿತ್ರಿಗೆ ಕಾರಣ ತಿಳಿಯದಿದ್ದರೂ, ಯಾಕೆಂದು ಕೇಳುವ ಧೈರ್ಯ ಬಾರದೆ ಇದ್ದರೂ ಖುಷಿಯಾಯಿತು. ಎಲ್ಲೋ ಊರ ಮೇಲೆ ತಿರುಗಲು ಹೋಗಿದ್ದ ಮಹೇಶ ಎಷ್ಟೋ ರಾತ್ರಿ ಬಂದಾಗಲೂ ಅಪ್ಪ, ಹೋಗಲಿ ಅಮ್ಮನೂ ಎನೋ ಹೇಳದೆ ಇದ್ದುದನ್ನು ಕಂಡು ಆಶ್ಚರ್ಯಗೊಂಡ. ನಿಶ್ಶಬ್ದವಾಗಿ ಊಟ ಮುಗಿಸಿ ತಾಟು ತೊಳೆದಿಟ್ಟು ಹಸೆ ಬಿಚ್ಚಲು ತಯಾರಾಗುತ್ತಿದ್ದಾಗಲೇ ಪಕ್ಕದಲ್ಲಿಯೇ ಮಲಗಿದ್ದ ಕುಟ್ಣಪ್ಪ ಕಣ್ಣು ಮುಚ್ಚಿಯೇ "ದುಡ್ಡಿನ ವ್ಯವಸ್ಥೆ ಆಗಿದೆ. ನಾಳೆಗೇ ಹೊರಡುವ ತಯಾರಿ ಮಾಡಿಕೊ" ಅಂದ. ತಾನು ಹೋಗುವುದು ಇನ್ನೂ ತನಗೇ ಖಾತ್ರಿಯಾಗಿರದೆ ಇದ್ದ ಮಹೇಶ ಅಪ್ಪನ ಮಾತನ್ನು ಕೇಳಿ ಗಹನವಾದ ಆಲೋಚನೆಯಲ್ಲಿ ಬಿದ್ದ. ಹಾಗೆ ಯೋಚಿಸುತ್ತಲೇ ನಿದ್ದೆ ಹೋಗಿಯೂಬಿಟ್ಟ.  
            ಕುಟ್ಣಪ್ಪ ಅಂದುಕೊಂಡಂತೆಯೇ ಆಯಿತು. ಮರಕ್ಕೆ ಹದಿಮೂರರಂತೆ ಒಟ್ಟೂ ಇಪ್ಪತ್ತು ಮರಗಳಿಗೆ ಇನ್ನೂರ ಅರವತ್ತು ರೂಪಾಯಿ ಕೊಡಬೇಕಾಗಿದ್ದ ಉಮೇಶ ಭಟ್ಟರು ಕೊನೆಯಲ್ಲಿ ಅವನ ಕೈಗಿತ್ತದ್ದು ಇನ್ನೂರು ಅಷ್ಟೇ. ದುಡ್ಡೆಲ್ಲ ಬ್ಯಾಂಕಿನಲ್ಲಿದೆ, ಮುಂದಿನ ಬಾರಿ ಹೋದಾಗ ತಂದಿಡುತ್ತೇನೆ. ಒಂದೆರಡು ವಾರ ಬಿಟ್ಟು ಬಾ. ಇನ್ನೊಂದು ಸಣ್ಣ ಕೊಯಿಲಿದೆ, ಅದನ್ನೂ ಮುಗಿಸಿಕೊಟ್ಟುಬಿಡು. ಎಲ್ಲ ಸೇರಿಸಿ ಕೊಡುತ್ತೇನೆ ಎಂಬ ಅಶ್ವಾಸನೆಯೊಂದಿಗೆ ಕೈತೊಳೆದುಕೊಂಡುಬಿಟ್ಟರು. ಹೀಗೆ ಆಗುತ್ತದೆಂಬ ಅರಿವು ಮೊದಲೇ ಇದ್ದ ಕುಟ್ಣಪ್ಪ ಪಾಲಿಗೆ ಸಿಕ್ಕಿದ್ದು ಪಂಚಾಮೃತವೆಂದುಕೊಳ್ಳುತ್ತ ಎಳನೀರಿನ ಬೊಂಡವೊಂದನ್ನು ಹಿಡಿದು ಮನೆಯತ್ತ ನಡೆದ. ಅವನು ನಿರ್ಧರಿಸಿಬಿಟ್ಟಿದ್ದ, ಈ ಭಟ್ಟರ ಕಪಟಕ್ಕೆ ಪ್ರತಿಯಾಗಿ ಆ ಬಾರಿ ಏನಾದರೂ ಮಾಡಲೇಬೇಕೆಂದು. ಮತ್ತೇನಿಲ್ಲ, ಇವತ್ತು ರಾತ್ರಿ ಅವರದೇ ಮತ್ತೊಂದು ತೋಟಕ್ಕೆ ಹೋಗಿ ಬೆಳೆದ ತೆಂಗಿನಕಾಯಿ, ಅಡಿಕೆಗೊನೆಗಳನ್ನೆಲ್ಲ ಇಳಿಸಿಕೊಂಡು ಬಂದುಬಿಡುವುದು. ಭಟ್ಟರಿಗೆ ಗೊತ್ತಾಗಲಿಕ್ಕಂತೂ ಶಕ್ಯವಿಲ್ಲ. ಬಾಯಿ ಬಾಯಿ ಬಡಿದುಕೊಳ್ಳಲಿ.
            ರಾತ್ರಿ ಊಟ ಮುಗಿಸಿ ಒಂದೆರಡು ತಾಸು ಮಲಗಿದನಷ್ಟೆ. ಹನ್ನೆರಡು ಗಂಟೆಯಾಗುತ್ತಲೇ ಥಟ್ಟನೆ ಎದ್ದವನೇ ಅಂಡುಕೊಕ್ಕೆಗೆ ಕತ್ತಿಯನ್ನು ಸಿಗಿಸಿಕೊಂಡು ಚೂಳಿಯೊಂದನ್ನು ಕೈಯಲ್ಲಿ ಹಿಡಿದು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟೇಬಿಟ್ಟ.
            ಸರಿಯಾಗಿ ಒಂದು ನಾಲ್ಕು ಮರ ಹತ್ತಿ ಇಳಿದಿದ್ದನೋ ಇಲ್ಲವೋ, ಭಟ್ಟರ ತೋಟದ ಪಕ್ಕದ ಹಾದಿಯಲ್ಲಿ ಯಾರೋ ಇಬ್ಬರು ಸೂಡಿ ಹಿಡಿದುಕೊಂಡು ಬರುತ್ತಿರುವುದು ಕಾಣಿಸಿತು. ಅವರು ಯಾರು, ಆ ದಾರಿಯಲ್ಲೇಕೆ ಬಂದರು, ಎಂಬುದನ್ನೆಲ್ಲ ಯೋಚಿಸುವ ಗೊಡವೆಗೆ ಹೋಗದೆ ಕ್ಷಣಾರ್ಧದದಲ್ಲಿ ಮರವೊಂದರ ಹಿಂದೆ ಸರಿದು ಕತ್ತಲಲ್ಲಿ ಕತ್ತಲಾದ. ಆದರೆ ದುರದೃಷ್ಟವಶಾತ್ ತಪ್ಪೊಂದು ಆಗಿಬಿಟ್ಟಿತ್ತು. ಚೂಳಿಯನ್ನು ಅಲ್ಲೇ, ಕೊಯ್ಯುತ್ತಿದ್ದ ಮರದಡಿಯಲ್ಲೇ ಬಿಟ್ಟುಬಿಟ್ಟಿದ್ದ. ದಾರಿಯಲ್ಲಿ ಬರುತ್ತಿದ್ದವರು ಮತ್ಯಾರೂ ಅಲ್ಲ, ಉಮೇಶ ಭಟ್ಟರೇ. ಬೇರೆ ಯಾವುದೋ ಊರಿಗೆ ಪರಾನ್ನಕ್ಕೆಂದು ಹೋದವರು ಬರಲು ತಡವಾಗಿ ಈ ಹೊತ್ತಿನಲ್ಲಿ ಮನೆಯ ದಾರಿ ಹಿಡಿದಿದ್ದರು. ಜೊತೆಯಲ್ಲಿ ಅವರನ್ನು ಕರೆದುಕೊಂಡು ಬರಲು ಹೋಗಿದ್ದ ಅವರ ಮಗನೂ ಇದ್ದ. ಚೂಳಿಯು ದಾರಿಯಲ್ಲಿ ಹೋಗುತ್ತಿರುವವರ ಕಣ್ಣಿಗೆ ಬೀಳದಿರಲಿ ಎಂದು ಇಷ್ಟದೈವ ಲಕ್ಷ್ಮೀನಾರಾಯಣನಲ್ಲಿ ಕುಟ್ಣಪ್ಪ ಮನಸಾರೆ ಮಾಡಿಕೊಂಡ ಪ್ರಾರ್ಥನೆ ಫಲ ಕೊಡಲೇ ಇಲ್ಲ. ತಮ್ಮ ತೋಟದಲ್ಲಿ ಈ ಅಪರಾತ್ರಿಯಲ್ಲಿ ಚೂಳಿಯನ್ನು ನೋಡಿದ ಉಮೇಶ ಭಟ್ಟರಿಗೆ ಇದು ಯಾರೋ ಕಳ್ಳತನ ಮಾಡಲು ಬಂದವರದೇ ಎಂದು ಗ್ರಹಿಸಲು ಬಹಳ ಹೊತ್ತು ಹಿಡಿಯಲಿಲ್ಲ. ಓಡಿಹೋಗಲು ದಾರಿಯೇ ಕಾಣದೆ ಕುಟ್ಣಪ್ಪ ಸಿಕ್ಕಿಯೂಬಿದ್ದುಬಿಟ್ಟ. ಬಾಯಿಗೆ ಬಂದಿದ್ದು, ಬಾರದೆ ಇದ್ದುದು, ಎಲ್ಲ ಬೈಗುಳಗಳ ಮಳೆಗರೆದ ಭಟ್ಟರು ತಮ್ಮ ಮಗನೆಡೆ ಒಮ್ಮೆ ನೋಡಿದರು. ಅಪ್ಪನ ಆವೇಶವನ್ನು ನೋಡಿ ಹುರುಪೇರಿದ ಗಣಪತಿ ಕುಟ್ನಪ್ಪನ ಮುಖ-ಮುಸುಡಿ ನೋಡದೆ ಸರಿಯಾಗಿ ನಾಲ್ಕು ಬಿಟ್ಟ. "ಮತ್ತೊಂದು ಬಾರಿ ನನ್ನ ತೋಟದ ಕಡೆ ಮುಖ ಮಾಡಿ ಮಲಗಿದರೂ ಕೊಟ್ಟು ಕೊಂದುಬಿಡುತ್ತೇನೆ ಹುಶಾರ್!" ಭುಸುಗುಡುತ್ತ ಕುಟ್ಣಪ್ಪ ಕೊಯ್ದಿಟ್ಟಿದ್ದ ಕಾಯಿಗಳನ್ನು ಚೂಳಿ ಸಮೇತ ತಮ್ಮ ಮಗನ ತಲೆಯ ಮೇಲೆ ಹೊರಿಸಿದರು ಭಟ್ಟರು.
"ಬೇಕಾಗಿತ್ತು, ನನಗೆ ಇದೆಲ್ಲ ಬೇಕಾಗಿತ್ತು. ಅಲ್ಲ ಈ ಭಟ್ಟರು ಹೀಗೆ ಎಂದು ಮೊದಲೇ ಗೊತ್ತಿದ್ದರೂ ಅವರ ಕಾಯಿ ಕೊಯ್ಯಲಿಕ್ಕೆ ಒಪ್ಪಿಕೊಂಡಿದ್ದಾದರೂ ಯಾಕೆ ನಾನು? ನಂತರ ಪಗಾರು ಪೂರ ಕೊಡಲಿಲ್ಲ ಅಂತ ಕದಿಯುವುದಕ್ಕೆ ಹೋಗಿದ್ದು ಸೊಕ್ಕು ತಲೆಗೇರಿಯೇ ಅಲ್ಲವಾ?" ಕುಟ್ಣಪ್ಪನಿಗೆ ತನ್ನನ್ನು ತಾನೂ ಎಷ್ಟು ಬಯ್ದುಕೊಂಡರೂ ಸಮಾಧಾನವೇ ಆಗುತ್ತಿಲ್ಲ. ಬಿಡುವವರಲ್ಲ ಭಟ್ಟರು. ನಾಳೆ ಬೆಳಗಾಗುತ್ತಲೇ ಇಡೀ ಊರಿಗೆ ಡಂಗೂರ ಸಾರುತ್ತಾರೆ. ಇನ್ನು ಯಾರ ಮನೆಯಲ್ಲೂ ತನ್ನನ್ನು ಕೆಲಸಕ್ಕೆ ಕರೆಯುವುದು ಸಂಶಯವೇ. ಒಂದು ವೇಳೆ ಕರೆದರೂ ತಾನು ಹೋಗುವುದಾದರೂ ಯಾವ ಮುಖವನ್ನು ಹೊತ್ತುಕೊಂಡು? ಹೀಗೆಲ್ಲ ಯೋಚಿಸುತ್ತ ಮಲಗಿದ ಕುಟ್ಣಪ್ಪನ ಬಳಿ ರಾತ್ರಿ ಕಳೆದು ಬೆಳಗಾದರೂ ನಿದ್ರೆ ಸುಳಿಯಲಿಲ್ಲ. ಬೆಳಿಗ್ಗೆ ಎದ್ದ ಸಾವಿತ್ರಿ ಸೊಪ್ಪಿಗೆ ಹೋಗಲೆಂದು ಚೂಳಿಯನ್ನು ಹುಡುಕಿ ಹುಡುಕಿ ಸಾಕಾಗಿ ಕುಟ್ಣಪ್ಪನನ್ನು ಕೇಳಲು ಅವನೂ ಸ್ವಲ್ಪ ಹುಡುಕಿದಂತೆ ನಾಟಕವಾಡಿ "ಥತ್, ಇತ್ತೀಚೆಗೆ ಏನೆಂದರೆ ಏನನ್ನಾದರೂ ಕದ್ದುಬಿಡುತ್ತಾರೆ. ಬಡ್ಡಿಮಕ್ಕಳು" ಎಂದು ಯಾರಿಗೋ ಬಯ್ಯುವ ನೆಪದಲ್ಲಿ ಮತ್ತೊಮ್ಮೆ ತನ್ನನ್ನು ತಾನೇ ಬಯ್ದುಕೊಂಡ. ಸೊಪ್ಪು ಕೊಯ್ಯುವ ಕೆಲಸಕ್ಕೆ ತನ್ನದಿವತ್ತು ರಜೆ ಎಂದು ಪಕ್ಕದ ಮನೆಯಾಕೆಯ ಹತ್ತಿರ ಹೇಳಿ ಕಳುಹಿಸಿದ ಸಾವಿತ್ರಿ ಬೆಳಗಿನ ತಿಂಡಿಗೆ ಅಣಿಮಾಡಿದಳು. ತಿಂಡಿ ಮುಗಿಯುತ್ತಲೇ ಲಗುಬಗೆಯಿಂದ ಮಗನ ಕೈಯಲ್ಲಿ ದುಡ್ಡನ್ನಿಟ್ಟು ಕಾರವಾರಕ್ಕೆಂದು ಕಳುಹಿಸಿದ ಕುಟ್ಣಪ್ಪ ನಿನ್ನೆ ರಾತ್ರಿಯ ಪ್ರಸಂಗವನ್ನು ಮಾತ್ರ ಯಾರಲ್ಲಿಯೂ ಹೇಳಲು ಹೋಗಲಿಲ್ಲ. ಉಮೇಶ ಭಟ್ಟರು ಯಾವ ರೀತಿ ಪ್ರಚಾರ ಮಾಡಿದ್ದರೆಂದರೆ ಮಧ್ಯಾಹ್ನದ ಹೊತ್ತಿಗೆ ರಾಮನಾಯ್ಕನೇ ಬಂದು ಆ ವಿಷಯದ ಬಗ್ಗೆ ಕುಹಕವಾಡುವಂತಾಗಿತ್ತು. ಅಷ್ಟಕ್ಕೂ ರಾಮನಾಯ್ಕನೇನು ಸಂಭಾವಿತನೆಂದಲ್ಲ. ಒಂದು ಕಾಲದಲ್ಲಿ ಕುಟ್ಣಪ್ಪನಿಗೆ ಸಾಥು ಕೊಟ್ಟವನೇ. ಆದರೆ ಸದ್ಯಕ್ಕೆ ಅದ್ಯಾವುದೂ ಗಣ್ಯವಾಗುವುದಿಲ್ಲ. ಸಿಕ್ಕಿಬಿದ್ದು ಪೆಟ್ಟುತಿಂದವನು ಕುಟ್ಣಪ್ಪ ಮಾತ್ರ.
            ಅಂದುಕೊಂಡಂತೆ ಕುಟ್ಣಪ್ಪನನ್ನು ಕೆಲಸಕ್ಕೆ ಕರೆಯುವುದನ್ನು ಕಮ್ಮಿ ಮಾಡಿದ್ದರು. ಶಂಕರ ಹೆಗಡೇರು ಕೂಡ ಒಂದೆರಡು ಬಾರಿ ದಾರಿಯಲ್ಲಿ ಸಿಕ್ಕವರು ದಾರಿಯಲ್ಲೇ ನಿಂತು ಮಾತಾಡಿ ಆಡಿದ ಮಾತಿನಲ್ಲಿಯೂ ತನಗೆ ವಾಪಸ್ ಬರಬೇಕಾಗಿದ್ದ ಹಣದ ಕುರಿತೇ ಒತ್ತಿ ಹೇಳಿದ್ದರು. ವಾರವೊಂದು ಕಳೆಯುವಷ್ಟರಲ್ಲಿ ಕುಟ್ನಪ್ಪನ ಕಾಲುಗಳು ತಾವೇ ತಾವಾಗಿ ಕೇರಿ ತುದಿಯ ಸಾರಾಯಿ ಅಂಗಡಿಯತ್ತ ನಡೆದವು. ಕುಡಿತವೇನೂ ಕುಟ್ನಪ್ಪನಿಗೆ ಹೊಸತಲ್ಲ. ಅಪರೂಪದ ಕಳ್ಳತನದಂತೆ ತಿಂಗಳಿಗೆ ಎರಡು-ಮೂರು ಬಾರಿ ಕುಡಿಯುತ್ತಿದ್ದ ಅಷ್ಟೆ. ಆದರೀಗ ಅದು ಅತಿಯಾಗಿ ಎರಡು-ಮೂರು ದಿನಕ್ಕೆ ಒಂದು ಬಾರಿ ಅನ್ನುವಂತಾಗಿತ್ತು. ಒಂದು ದಿನವಂತೂ ಮಗ ದಿನೇಶನಿಗೆ ಪಟ್ಟಿ-ಪುಸ್ತಕ ತರುತ್ತೇನೆ ಎಂದು ಹೆಂಡತಿಯ ಬಳಿ ತೆಗೆದುಕೊಂಡು ಹೋದ ದುಡ್ಡಲ್ಲಿ ಕುಡಿದು ಬಂದು ಮನೆಯಲ್ಲಿ ರಾಮಾಯಣ-ಮಹಾಭಾರತವೇ ನಡೆದಿತ್ತು. ಮರುದಿನ ಪಟ್ಟಿ ಇಲ್ಲದೆ ಶಾಲೆಗೆ ಹೋದ ದಿನೇಶ ಕಾಲ ಮೇಲೆ ಕೆಂಪಗೆ ಬರೆ ಬೀಳುವಂತೆ ಮಾಸ್ತರರ ಕೈಯಲ್ಲಿ ಹೊಡೆತ ತಿಂದು ಬಂದಿದ್ದ. ಅದನ್ನು ನೋಡಿ ಕುಟ್ನಪ್ಪನಿಗೆ ಅಯ್ಯೋ ಪಾಪ ಎನ್ನಿಸದೆ ಇರಲಿಲ್ಲ. ಆಗಿಂದಾಗ ಅವತ್ತಿನ ಕೂಲಿ ದುಡ್ಡಲ್ಲಿ ಪಟ್ಟಿ ತಂದಿಟ್ಟು ಮಗನ ಕಣ್ಣೊರೆಸಿದ್ದ. ಅರ್ಧ ಮುಚ್ಚಿದ ಬಾಗಿಲ ಹಿಂದೆ ಕೋಣೆಯ ಕತ್ತಲಲ್ಲಿ ನಿಂತಿದ ಸಾವಿತ್ರಿ ಇದನ್ನೆಲ್ಲ ನೋಡಿ ತಾನೂ ಸೆರಗಂಚಿನಿಂದ ಕಣ್ಣೊರೆಸಿಕೊಂಡಿದ್ದಳು.
            ಇದ್ದಕ್ಕಿದ್ದಂತೆ ಅದೊಂದು ದಿನ ಮಹೇಶ ವಾಪಸ್ ಬಂದುಬಿಟ್ಟ. ಯಾವ ಬಟ್ಟೆಯಲ್ಲಿ ಹೋಗಿದ್ದನೋ ಅದರಲ್ಲೇ ಹಿಂದಿರುಗಿದ್ದ. ಕುಟ್ನಪ್ಪನಿಗೆ ಅವನ ಸೋತ ಮುಖವನ್ನು ನೋಡುತ್ತಲೇ ಏನಾಗಿರಬಹುದೆಂಬ ಅಂದಾಜು ಆಗಿಹೋಯಿತು. ಹೆಗಲ ಮೇಲಿನ ಬ್ಯಾಗನ್ನು ಕೆಳಗೂ ಇಳಿಸದೆ ಅಂಗಳದಲ್ಲೇ ನಿಂತು ಹೇಳಿದ್ದ ಮಹೇಶ "ಎಲ್ಲ ಮೋಸ ಅಪ್ಪ. ಕೆಲಸವೂ ಇಲ್ಲ ಮಣ್ಣೂ ಇಲ್ಲ". ದುಡ್ಡನ್ನೆಲ್ಲ ಕಟ್ಟಿಕೊಂಡು ಬಿಲ್ಡಿಂಗಿನ ಷಟರ್ ಎಳೆದು ಅದ್ಯಾವುದೋ ಏಜನ್ಸಿ ಎಂದು ಬೋರ್ಡು ಹಾಕಿಕೊಂಡ ಮನುಷ್ಯ ರಾತ್ರೋರಾತ್ರಿ ಪರಾರಿಯಾಗಿದ್ದ. ಕೊಟ್ಟು ಕೆಟ್ಟ ಮಹೇಶ ಮತ್ತು ಇನ್ನೂ ಹಲವರು ಕಣ್ಣಿಗೆ ನೀರು ಹಚ್ಚಿಕೊಂಡು ಮನೆಯ ದಾರಿ ಹಿಡಿದಿದ್ದರು. ಎಲ್ಲಾದರೂ ಓಡಿಹೋಗಿಬಿಡಲೆ ಎಂಬ ಆಲೋಚನೆ ಕ್ಷಣಕಾಲ ಮಹೇಶನ ತಲೆಯಲ್ಲಿ ಸುಳಿದಿತ್ತು. ಆದರೆ ಅಷ್ಟೇ ಬೇಗ ಅದೆಲ್ಲ ಆಗುವ ಕೆಲಸವಲ್ಲ ಎಂಬ ಅರಿವೂ ಆಗಿತ್ತು. ಅವನಂದುಕೊಂಡಿದ್ದನ್ನು ಅಪ್ಪನಿಗೆ ಹೇಳಿದ್ದರೆ ಸಂಪೂರ್ಣ ಸಮ್ಮತಿ ಕೊಟ್ಟುಬಿಡುತ್ತಿದ್ದನೇನೋ. ಆದರೆ ಈಗ ಆಗಿದ್ದೆಲ್ಲವನ್ನೂ ಸುಮ್ಮನೆ ಕೂತು ಕೇಳಿಸಿಕೊಂಡವನೇ ಏನೂ ಆಗಿಲ್ಲವೆಂಬಂತೆ ಹಳೇ ಅಂಗವಸ್ತ್ರವೊಂದನ್ನು ತಲೆಗೆ ಚಂಡಿ ಕಟ್ಟಿ ಮನೆಯಿಂದ ಹೊರಗೆ ಹೋಗಿಬಿಟ್ಟಿದ್ದ.
            ಅಂದು ಆಶ್ಚರ್ಯವೆಂಬಂತೆ ಶಂಕರ ಹೆಗಡೇರೇ ಕೆಲಸಕ್ಕೆ ಹೇಳಿಕಳುಹಿಸಿದ್ದರು. ಅದನ್ನೇ ಕಾಯುತ್ತಿದ್ದನೆಂಬಂತೆ ಕುಟ್ನಪ್ಪ ಬೆಳಗಿನ ತಿಂಡಿಯನ್ನೂ ತಿನ್ನದೆ ಅವರ ಮನೆಗೋಡಿದ್ದ. "ಒಂದು ನಾಲ್ಕು ಮರ ಇದೆ ಅಷ್ಟೇ ಕುಟ್ಣಪ್ಪ. ಬೇಗ ಕೊಯ್ದುಮುಗಿಸಿಬಿಡುವ ಬಾ" ಎನ್ನುತ್ತ ಮನೆ ಮುಂದಿನ ತೋಟದ ಕಡೆ ನಡೆದರು ಹೆಗಡೇರು. ಸದ್ದಿಲ್ಲದೇ ಅವರನ್ನು ಹಿಂಬಾಲಿಸಿದ ಕುಟ್ಣಪ್ಪ ಸುಮಾರು ಮೂರ್ನಾಲ್ಕು ತೆಂಗಿನಮರಗಳನ್ನು ಸರಿಯಾಗಿಯೇ ಹತ್ತಿಳಿದ. ಮುಂದಿನ ಮರದ ತುದಿಯಲ್ಲಿದ್ದವ ಏಕ್ ದಂ ಜಾರಿಬಿಟ್ಟ. ಜಾರಿದನೋ ಅಲ್ಲ ಹಾರಿದನೋ ಒಟ್ಟಾರೆ ಕಾಯಿ ಗೊಂಚಲಿನ ಜೊತೆ ಕುಟ್ಣಪ್ಪನೂ ಕೆಳಬರುತ್ತಿರುವುದು ಹೆಗಡೇರಿಗೆ ಗೋಚರವಾಯಿತು. ನೆಲಮುಟ್ಟುವ ಮೊದಲು, ಗಾಳಿಯಲ್ಲಿದ್ದಾಗ ಅದೇಕೋ ಕುಟ್ಣಪ್ಪನಿಗೆ ಭಯ-ಭೀತಿ ಮುಂತಾದವುಗಳು ಉಂಟಾಗುವ ಬದಲು "ಇಲ್ಲ. ನನ್ನ ಮಗ ಅಷ್ಟು ಕೆಲಸಕ್ಕೆ ಬಾರದವನಲ್ಲ. ಕಾರವಾರವಲ್ಲದಿದ್ದಲ್ಲಿ ಮತ್ತೊಂದೆಡೆ ಇನ್ನೊಂದು ಕೆಲಸವನ್ನು ಹುಡುಕುತ್ತಾನೆ. ತನ್ನ ಕಾಲಮೇಲೆ ತಾನು ನಿಲ್ಲುತ್ತಾನೆ. ಸ್ವಲ್ಪ ಸಮಯ ಬೇಕಷ್ಟೆ" ಎಂದೆನಿಸುತ್ತಿತ್ತು.

Sunday, 16 June 2013

360 ಎಲ್ಲಿ ಹೋಯಿತು?

ಹತ್ತು, ಹದಿನೈದು ನಿಮಿಷಗಳಿಗೊಮ್ಮೆ ಪುರುಸೊತ್ತಿಲ್ಲದಂತೆ, ಬೇಡವೆಂದರೂ ಬರುತ್ತಿದ್ದ

ಹಗಲುಗಳಲ್ಲೆಲ್ಲ ಖಾಲಿ ಖಾಲಿಯಾಗಿ ಹೋಗುತ್ತಿದ್ದ 

ಇಷ್ಟು ಹೊತ್ತಿನಲ್ಲಾಗಲೇ ಬಂದುಬಿಡಬೇಕಾಗಿದ್ದ 

ಮಾರಾಟವಾಗದೆ ಹಾಗೆ ಉಳಿದ ಬಣ್ಣದ ಕಾಗದದ ಗಿರಗಿಟ್ಲೆ, ಹವೆ ಹೊರಬಿಟ್ಟು ಚಪ್ಪಟೆಯಾದ ಬಲೂನುಗಳನ್ನು ಕಟ್ಟಿದ ಕೋಲನ್ನು ಹಿಡಿದ ಕೋಲಿನಂತಹ ಹುಡುಗ ಕಾಯುತ್ತಿದ್ದ 

ಸ್ಟ್ಯಾಂಡಿನ ಪಕ್ಕದ 'ಕಾಫಿ ಡೇ'ಯಿಂದ ತಂಪಾಗಿ ಹೊರಬಂದ ಜೋಡಿ, ಒಂದು ವೇಳೆ ಬಂದರೂ ಹತ್ತುವುದು ಬೇಡವೆಂದುಕೊಂಡು ನಿಂತಿರುವಾಗ 

ದಿನದ ಕೆಲಸ ಮುಗಿಸಿ ಸಿಗರೇಟೊಂದನ್ನು ಈಗಷ್ಟೇ ಬೂದಿಮಾಡಿ ಹೊಗೆಯುಗುಳುತ್ತಲೇ ಬಂದು ನಿಂತ ಸಾಫ್ಟ್ವೇರು ಎಂಜಿನಿಯರನನ್ನು ಹತ್ತಿಸಿಕೊಳ್ಳಬೇಕಾಗಿದ್ದ 

ಜ್ವರದಿಂದ ನರಳಿದ್ದ ತನ್ನ ಪುಟ್ಟ ಮಗುವನ್ನು ಹೊತ್ತು ಆಸ್ಪತ್ರೆಗೆ ಬಂದು ವಾಪಸು ಹೊರಡಲು ತಡವಾಗಿ ಕ್ಷಣಕ್ಕೊಮ್ಮೆ ಅದರ ಹಣೆ ಮುಟ್ಟಿ ತಳಮಳಗೊಳ್ಳುತ್ತಿರುವಾಗ

ಬೆಳಗಿಂದ ದುಡಿದು ಪಡೆದ ಕೂಲಿಯಲ್ಲಿ ಮೂಗಿನ ತುದಿವರೆಗೆ ಕುಡಿದು ಸಂಪೂರ್ಣ ತೀರ್ಥರೂಪನಾಗಿ ನಿಂತಲ್ಲೇ ತೇಲುತ್ತಿದ್ದವನ ಹತ್ತಿಸಿಕೊಳ್ಳದೆ ಮುಂದೆ ಹೋಗಬೇಕಾಗಿದ್ದ

ಶಾಲೆಯಲ್ಲಿ ಕಲಿತದ್ದಷ್ಟೇ ಅಲ್ಲದೆ ಟ್ಯೂಶನ್ನಿನ ಪಾಠವನ್ನೂ ಹೇಗೆ ನೆನಪಿಟ್ಟುಕೊಳ್ಳುವುದೆಂದು ಬಗೆಹರಿಯದೆ ಕೂತ ಹುಡುಗನ ಬ್ಯಾಗಿನ ಭಾರವನ್ನು ಕಡಿಮೆ ಮಾಡಬೇಕಾಗಿದ್ದ

ಮುಂದೆಲ್ಲೋ ಹೋಗಿಳಿದು ತನ್ನೂರಿನ ಬಸ್ಸು ಹತ್ತಲಿರುವ, ತನ್ನಷ್ಟೇ ಗಾತ್ರದ ಚೀಲಕ್ಕಾತುಕೊಂಡು ನಿಂತವನ ಬಿಟ್ಟು

ರಾತ್ರಿ ಪಾಳಿಯ ಮತ್ಯಾವುದೋ ಕೆಲಸಕ್ಕೆಂದು ಮತ್ತೆಲ್ಲಿಗೋ ಹೋಗಬೇಕಾಗಿದ್ದವರನ್ನು ಅಲ್ಲಿಗೆ ಕರೆದೊಯ್ಯಬೇಕಾಗಿದ್ದ

ಟೆರೇಸಿನ ಮೇಲೆ ಒಣಹಾಕಿದ್ದ ಬಟ್ಟೆಗಳೆಲ್ಲ ಮಳೆಗೆ ಎಲ್ಲಿ ಒದ್ದೆಯಾದಾವೋ ಎಂದು ಪದೇ ಪದೇ ಆಕಾಶ ನೋಡಿ ಆತಂಕಗೊಂಡ ಗೃಹಿಣಿ ಕಾಯುತ್ತಿದ್ದ

ದಿನವಿಡೀ ಗಾರೆ ಕೆಲಸ ಮಾಡಿ ಮೈಮೇಲೆಲ್ಲ ಕರೆಗಟ್ಟಿದ ಸಿಮೆಂಟು-ಧೂಳನ್ನು ಈಗಷ್ಟೇ ತಿಕ್ಕಿ ತಿಕ್ಕಿ ತೊಳೆದು ಸ್ನಾನ ಮಾಡಿ ಲೈಫ್ ಬಾಯ್ ಘಮ ಬೀರುತ್ತ ನಿಂತ ಸರವಣನನ್ನು ಮನೆಮುಟ್ಟಿಸಬೇಕಾಗಿದ್ದ

ಮುಖದ ತುಂಬ ಪೌಡರು ಮೆತ್ತಿಕೊಂಡು, ತಲೆತುಂಬ ಮಲ್ಲಿಗೆ ಮುಡಿದು, ಸ್ಲೀವ್ ಲೆಸ್ಸು ಬ್ಲೌಸು ತೊಟ್ಟು, ಹೈ ಹೀಲ್ದು ಚಪ್ಪಲಿ ಮೆಟ್ಟಿ, ಮೊಬೈಲನ್ನು ಕಿವಿಗೆ ಚುಚ್ಚಿ ಗಿರಾಕಿಯೊಂದಿಗೆ ಮೈಯನ್ನು ಎಷ್ಟಕ್ಕೆ ಮಾರುವುದೆಂಬ ವಾದದಲ್ಲಿ ತೊಡಗಿದ ಆಕೆ ಹತ್ತಬೇಕಾಗಿದ್ದ

360....

ಗಂಟೆ ಹತ್ತಾಯ್ತು
ರಸ್ತೆ ಬರಡಾಯ್ತು
ಮೋಡ ದಟ್ಟವಾಯ್ತು
ಚಳಿ ಜೋರಾಯ್ತು

....ಎಲ್ಲಿ ಹೋಯಿತು? 360....
....ಎಲ್ಲಿ ಹೋಯಿತು?

Saturday, 7 July 2012

ಮತ್ತೊಂದು ಲೇಖನ

ಈ ಲೇಖನ ಜೂನ್ 20ರಂದು ವಿಜಯವಾಣಿ ದಿನಪತ್ರಿಕೆಯ ಅದೇ 'ಮಸ್ತ್' ಪುರವಣಿಯಲ್ಲಿ ಪ್ರಕಟವಾಯಿತು.



ನೆನಪೊಂದೆ ಉಳಿಯುವುದು

                ಅಂತೂ ಸಿ.ಇ.ಟಿ ಪರೀಕ್ಷೆಯನ್ನು ಒಳ್ಳೆಯದು ಅನ್ನಬಹುದಾದಂತಹ ಒಂದು ರ್‍ಯಾಂಕಿನೊಂದಿಗೆ  ಪಾಸು ಮಾಡಿ ಕೌನ್ಸೆಲಿಂಗಿನಲ್ಲಿ ಆರ್.ಎನ್.ಎಸ್ ಎಂಜಿನಿಯರಿಂಗ್ ಕಾಲೇಜನ್ನೇ ಬೇಕೆಂದು ಆಯ್ದುಕೊಂಡು ಕಾಲೇಜಿನ ಜೊತೆಗೆ ಹಾಸ್ಟೆಲಿಗೂ ಅಡ್ಮಿಷನ್ ಮಾಡಿಸಿಯೇಬಿಟ್ಟೆ. ಸುಮಾರು ಒಂದು ವಾರದ ನಂತರ ಕಾಲೇಜು ಶುರುವಾಗಲಿತ್ತು. ಇನ್ನು ಹೀಗೆ ಫ್ರೀಯಾಗಿ ಇರಲು ಆಗುವುದೇ ಇಲ್ಲವೆಂಬಂತೆ ಊರಲ್ಲಿ ಮಜಾ ಮಾಡಿ ಸರಿಯಾಗಿ ಕಾಲೇಜು ಶುರುವಾಗುವ ದಿನ ಬೆಳಿಗ್ಗೆ ಎರಡನೇ ಬಾರಿ ಬೆಂಗಳೂರಿಗೆ ಕಾಲಿಟ್ಟಿದ್ದೆ. ಅಂದು ತಾರೀಖು ೧೬ನೇ ಸೆಪ್ಟೆಂಬರ್ ೨೦೦೮.
                ಮೆಜೆಸ್ಟಿಕ್ಕಿನಿಂದ ಒಂದು ಗಂಟೆ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸಿ ಎಂಟೂವರೆಗೆ ಹೆಗಲ ಮೇಲೊಂದು, ಕೈಲೆರಡು ಮಣಭಾರದ ಬ್ಯಾಗುಗಳನ್ನು ಹಿಡಿದು ಹಾಸ್ಟೆಲ್ ತಲುಪಿದೆ. "ತಗೊಳಪ್ಪ ಕೀ, ರೂಮ್ ನಂಬರ್ ೨೫" ಎನ್ನುತ್ತ ದಾರಿ ತೋರಿಸಿದರು ವಾರ್ಡನ್. ರೂಮಿನ ಹತ್ತಿರ ಬಂದು ನೋಡುತ್ತೇನೆ, ಬಾಗಿಲು ತೆರೆದೇ ಇದೆ. ರೂಮ್ ಮೇಟ್ಸ್ ಆಗಲೇ ಬಂದುಬಿಟ್ಟಿದ್ದಾರೆ ಎಂಬ ಅರಿವಾಯಿತು. ಒಳಬರುತ್ತಲೇ ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಳ್ಳುತ್ತಿದ್ದವನೊಬ್ಬ "ಬಾರಪ್ಪಾ! ಯಾವ ಬ್ರಾಂಚ್? ಯಾವೂರು? ರ್‍ಯಾಂಕ್ ಎಷ್ಟು?" ಎಂದು ಪ್ರಶ್ನೆಗಳ ಮಳೆಗರೆದ. ಖಾಲಿ ಇದ್ದ ಮಂಚವೊಂದರ ಅಡಿಯಲ್ಲಿ ಬ್ಯಾಗುಗಳನ್ನು ಸರಿಸಿಡುತ್ತಾ ನಾನು ಅವನ ಪ್ರಶ್ನೆಗಳನ್ನೆಲ್ಲ ಒಂದೊಂದಾಗಿ ಉತ್ತರಿಸಿ "ನಿಮ್ಮ ಹೆಸರೇನು?" ಎಂದು ಕೇಳಿದೆ. "ವಿನೋದ್. ನಿಂದು?" ಆತ ಕೇಳಿದ. "ವಾಗೀಶ. ನಿಮ್ಮದು ಯಾವೂರು?" ಈ ಸಂಭಾಷಣೆ ಯಾವಾಗ ಮುಗಿಯುವುದೋ ಎಂಬ ಭಾವದಲ್ಲಿ ಕೇಳಿದೆ. "ನಾವು, ನೀವು ಅನ್ನಬೇಕಿಲ್ಲ, ರೂಮ್ ಮೇಟ್ಸ್ ಆದಮೇಲೆ ಅವೆಲ್ಲ ಯಾಕೆ? ಬಾಗಲಕೋಟೆ ನಂದು." ನನಗೀಗ ಸ್ವಲ್ಪ ಧೈರ್ಯ ಬಂತು. "ಕ್ಲಾಸುಗಳು ಶುರುವಾಗೋ ಹೊತ್ತಾಯಿತು. ನಾನು ಹೊರಡುತ್ತೇನೆ. ಕೆಳಗೆ ಮೆಸ್ ಇದೆ, ತಿಂಡಿ ಮಾಡು" ಎನ್ನುತ್ತ ಹೊರನಡೆದ ನನ್ನ ರೂಮ್ ಮೇಟ್ ವಿನೋದ.
                ಶಾಸ್ತ್ರಕ್ಕೆಂಬಂತೆ ಸ್ನಾನ ಮಾಡಿ ತಿಂಡಿ ಮುಗಿಸಿ ಬ್ಯಾಗು ಹೆಗಲಿಗೇರಿಸಿಕೊಂಡು ಓಡೋಡುತ್ತ ಕ್ಲಾಸ್ ರೂಮ್ ತಲುಪುವಷ್ಟರಲ್ಲಾಗಲೇ ಯಾರೋ ಕಲಿಸುತ್ತಿದ್ದರು ಒಳಗೆ. ನನ್ನಷ್ಟಕ್ಕೆ ನಾನು "ಎಕ್ಸ್ ಕ್ಯೂಸ್ ಮಿ ಸರ್" ಎಂದು ಅವರು ಅನುಮತಿ ನೀಡುವ ಮೊದಲೇ ಸೀದ ಹೋಗಿ ಕೊನೇ ಬೆಂಚಿನಲ್ಲಿ ಕುಳಿತೆ. ನನಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುವುದಿಲ್ಲ, ಪಕ್ಕ ಕುಳಿತವನು ಅಕಸ್ಮಾತ್ ಇಂಗ್ಲೀಷಿನಲ್ಲೇ ಮಾತಾಡಿದರೆ ಏನು ಮಾಡುವುದೆಂಬ ಅಳುಕಿತ್ತು. ಅದೃಷ್ಟವಶಾತ್ ಆತ ಉಡುಪಿ ಕಡೆಯವನಾಗಿದ್ದ. ಹಾಗಾಗಿ ಉತ್ತರ ಕನ್ನಡದವನಾದ ನನಗೆ ಕನ್ನಡ ಮಾತಾಡುವಲ್ಲಿಯೂ ಅನುಕೂಲವಾಯಿತು. ಆ ಪೀರಿಯಡ್ ಹಾಗೇ ಮುಗಿದು ಮತ್ತೊಬ್ಬ ಲೆಕ್ಚರರ್ ಒಳಬಂದು ಕಲಿಸಲಾರಂಭಿಸಿದರು. ನಾನು ಕಿಸೆಯಲ್ಲಿ ಒಮ್ಮೆ ಕೈಯಾಡಿಸಿದೆ. ಒಂದು ಚ್ಯೂಯಿಂಗ್ ಗಮ್ ಸಿಕ್ಕಿತು. ಅದನ್ನು ಬಾಯಲ್ಲಿಟ್ಟು ಅಗಿಯುತ್ತ ಬಲಗೈಯಲ್ಲಿ ಪೆನ್ನನ್ನು ಆಡಿಸುತ್ತಾ ಹಾಯಾಗಿ ಕಿಟಕಿಯಾಚೆ ನೋಡುತ್ತ ಕುಳಿತಿದ್ದೆ. "ಪರ್ಸನ್ ಸಿಟ್ಟಿಂಗ್ ಇನ್ ದ ಲಾಸ್ಟ್ ಬೆಂಚ್, ಕ್ಯಾನ್ ಯು ಪ್ಲೀಸ್ ಗೆಟ್ ಅಪ್?", ನಾನು ಥಟ್ಟನೆ ಎದ್ದುನಿಂತ ರಭಸಕ್ಕೆ ಕೈಯಲ್ಲಿದ್ದ ಪೆನ್ ಕೆಳಗೆ ಬಿದ್ದು ಆವರಿಸಿದ್ದ ನಿಶ್ಶಬ್ದವನ್ನು ಕಲಕಿತು. "ಬಾಯಲ್ಲಿರುವುದನ್ನು ಈಗಲೇ ಉಗಿದು ಬಾ." ಆಜ್ನಾಪಿಸಿದರು ಲೆಕ್ಚರರ್. ಕ್ಷಣವೂ ತಡಮಾಡದೆ ಹೊರಗೋಡಿದೆ. ಆದರೆ ರೆಸ್ಟ್ ರೂಮ್ ಹುಡುಕಿ ಚ್ಯೂಯಿಂಗ್ ಗಮ್ ಉಗಿದು ಬಾಯಿ ತೊಳೆದುಕೊಂಡು ಕ್ಲಾಸಿಗೆ ವಾಪಸ್ ಬರುವಷ್ಟರಲ್ಲಿ ನಮ್ಮ ಸರ್ರು ಹಾಜರಿ ತೆಗೆದುಕೊಂಡು ಹೋಗಿಯೇಬಿಟ್ಟಿದ್ದರು. ಮುಂದಿನ ಎರಡು ಪೀರಿಯಡ್ಡುಗಳು ಮತ್ತೇನೂ ಅವಘಡಗಳು ಘಟಿಸದೆ ಹಾಗೆಯೇ ಕಳೆದವು.
                ಕಾಲೇಜು ಮುಗಿಯುತ್ತಿದ್ದಂತೆಯೇ ಮೈದಾನದಲ್ಲಿ ಕ್ರಿಕೆಟ್, ಬಾಸ್ಕೆಟ್ ಬಾಲ್, ಮುಂತಾದ ವಿವಿಧ ಆಟಗಳಲ್ಲಿ ಹುಡುಗರ ಗುಂಪುಗಳು ನಿರತವಾದವು. ನನಗೆ ಏನನ್ನೂ ಆಡುವ ಮನಸ್ಸಿಲ್ಲವಾಗಿದ್ದುದರಿಂದ ಹುಲ್ಲಿನ ಮೇಲೆ ಸೂರ್ಯಾಸ್ತವಾಗುವುದನ್ನು ನೋಡುತ್ತ ಕುಳಿತೆ. ನಂತರ ವಿನೋದನ ಜೊತೆ ಹೊರಗೆ ಹೋಗಿ ನಿತ್ಯಬಳಕೆಯ ಕೆಲ ವಸ್ತುಗಳನ್ನೂ, ಪುಸ್ತಕ-ನೋಟ್ ಬುಕ್ಕುಗಳನ್ನೂ ಕೊಂಡುಬಂದೆ. ರಾತ್ರಿ ಊಟ ಮುಗಿಸಿದಮೇಲೆ ಹಾಸ್ಟೆಲ್ಲಿನಲ್ಲಿ ನನ್ನದೇ ಬ್ಯಾಚಿನ ಮತ್ತಷ್ಟು ಹುಡುಗರ ಪರಿಚಯವಾಯಿತು. ಅವರಲ್ಲಿ ಕೆಲವರು ನನ್ನ ಜಿಲ್ಲೆಯವರೇ ಇದ್ದುದನ್ನು ತಿಳಿದು ನನಗೆ ಮತ್ತಷ್ಟು ಸಮಾಧಾನವೂ ಆಯಿತು. ಇನ್ನು ಕೆಲವು ದಿನಗಳಲ್ಲಿ ಸೀನಿಯರ್‍ಸ್ ರ್‍ಯಾಗಿಂಗಿಗೆ ಕರೆಯುವವರಿದ್ದಾರೆ ಎಂಬ ಸುದ್ದಿಯನ್ನೂ ಯಾರೋ ಕಿವಿಗೆ ಹಾಕಿದರು. ಆಗ ಸಮಾಧಾನದ ಜೊತೆಗೆ ಸಣ್ಣದಾಗಿ ಹೆದರಿಕೆಯೂ ಶುರುವಾಯಿತು. ಇದಕ್ಕೂ ಮೊದಲು ಹಾಸ್ಟೆಲ್ಲಿನಲ್ಲಿ ಇದ್ದೆನಾದರೂ ಈ ರ್‍ಯಾಗಿಂಗಿನ ಅನುಭವ ಇನ್ನೂ ಆಗಿರಲಿಲ್ಲ. ಹೆದರಿಕೆಯ ಜೊತೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಕುತೂಹಲವೂ ಇತ್ತೆನ್ನಿ. ಕಡೆಯದಾಗಿ ಮಲಗುವ ಮುನ್ನ ಮನೆಗೆ ಕರೆ ಮಾಡಿ ಅಪ್ಪ ಅಮ್ಮನೊಂದಿಗೆ ಮಾತನಾಡುತ್ತ "ಕಾಲೇಜು ಪರವಾಗಿಲ್ಲ, ಆರಿಸಿಕೊಂಡು ತಪ್ಪು ಮಾಡಲಿಲ್ಲ" ಎನ್ನುವಾಗ ಮೊದಲ ದಿನವನ್ನು ಯಶಸ್ವಿಯಾಗಿ ಮುಗಿಸಿದ ಧನ್ಯತಾಭಾವವಿತ್ತು.
                ಎಂಜಿನಿಯರಿಂಗಿನ ನಾಲ್ಕೂ ವರ್ಷಗಳನ್ನು ಮುಗಿಸಿ ಬರೋಬ್ಬರಿ ನಲವತ್ತೈದು ಪರೀಕ್ಷೆಗಳನ್ನು ಬರೆದು ಅವುಗಳಲ್ಲಿ ನಾಲ್ಕರ ಫಲಿತಾಂಶವನ್ನು ಎದುರುನೋಡುತ್ತಿದ್ದೇನೆ. ಆದರೆ ಮೊದಲ ದಿನದ ನೆನಪು ಮನದಲ್ಲಿ ಇನ್ನೂ ಹಚ್ಚ ಹಸಿರು. ಬೀತೆ ಪಲ್ ಫಿರ್ ನಹೀ ಆಯೆಂಗೆ.


ಜಾಗದ ಅಭಾವದಿಂದ ದುರದೃಷ್ಟವಶಾತ್ ಈ ಲೇಖನದ ಮೊದಲ ಅರ್ಧಭಾಗವಷ್ಟೇ ಪತ್ರಿಕೆಯಲ್ಲಿ ಪ್ರಕಟವಾಯಿತು. ಆದರೇನಾಯಿತು? ಬ್ಲಾಗಿನಲ್ಲಿ ಪೂರ್ಣವಾಗಿಯೇ ಪೋಸ್ಟ್ ಮಾಡುವ ಸ್ವಾತಂತ್ರ್ಯವಿದೆಯೆಂದು ನಂಬಿದ್ದೇನೆ. ಓದಿದ್ದಕ್ಕೆ ಧನ್ಯವಾದ. 

Thursday, 19 April 2012

ಲೇಖನ

ನಿನ್ನೆ, ಅಂದರೆ ೧೮ನೆ ತಾರೀಖು ಈ ನನ್ನ ಲೇಖನ ವಿಜಯವಾಣಿ ದಿನಪತ್ರಿಕೆಯ  ಪುರವಣಿಯಲ್ಲಿ ಪ್ರಕಟವಾಯಿತು. ನಮ್ಮಲ್ಲಿ ಹಲವರಿಗೆ(ನನಗೂ ಕೂಡ ) ದಿನಪತ್ರಿಕೆ, ಅದೂ ಕನ್ನಡ ದಿನಪತ್ರಿಕೆ ಓದುವ ಅಭ್ಯಾಸ ಇರುವುದಿಲ್ಲವಾದ್ದರಿಂದ ಇದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.

 ವಸತಿ ಶಾಲೆಯ ರಾತ್ರಿ ಜಾತ್ರೆ 

         ಆಗ ನಾನು ಹತ್ತನೇ ಕ್ಲಾಸು. ಓದುತ್ತಿದ್ದುದು ಜಿಲ್ಲೆಗೇ ಪ್ರತಿಷ್ಠಿತವಾದ ನವೋದಯ ಶಾಲೆಯಲ್ಲಿ. ನಮ್ಮ ಶಾಲೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮಳಗಿ ಎಂಬ ಗ್ರಾಮದಲ್ಲಿ. ವಸತಿ ಶಾಲೆಯಾದ್ದರಿಂದ ಮಕ್ಕಳ ಜವಾಬ್ದಾರಿ ಶಾಲೆಯ ಆಡಳಿತದ ಮೇಲಿರುತ್ತದೆ. ಸುರಕ್ಷೆಯ ದೃಷ್ಟಿಯಿಂದ ಕಂಪೌಂಡಿನಿಂದಾಚೆ ಸಕಾರಣವಿಲ್ಲದೆ, ಜೊತೆಗೆ ಯಾರೂ ಇಲ್ಲದೆ ಕಾಲಿಡುವುದು ನಿಷಿದ್ಧವಾಗಿತ್ತು. ಇದೊಂದು ನಿಯಮವೆಂದಮೇಲೆ ನಿಯಮವನ್ನು ಉಲ್ಲಂಘಿಸುವುದು ವಿದ್ಯಾರ್ಥಿಗಳಾದ ನಮ್ಮ ಆದ್ಯ ಕರ್ತವ್ಯವೆಂದು ತಿಳಿದುಕೊಂಡಿದ್ದ ಕಾಲ. ಹೀಗಾಗಿ ರೂಲ್ಸ್ ಬ್ರೇಕ್ ಮಾಡಿ ನಮ್ಮ ಸಾಹಸ ಪರಾಕ್ರಮಗಳನ್ನು ಸ್ನೇಹಿತರೆದುರಿಗೆ ಪ್ರದರ್ಶನ ಮಾಡಲು ಯಾವುದಾದರೂ ಒಂದು ಸಣ್ಣ ಅವಕಾಶ ಸಿಗಬಹುದೇನೋ ಎಂದು ಕಾಯುತ್ತಲೇ ಇರುತ್ತಿದ್ದೆವು. 
ಮಳಗಿ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಶುರುವಾಗಿಬಿಟ್ಟಿದೆ. ಜಾತ್ರೆಗೆ ಮಕ್ಕಳೆಲ್ಲರನ್ನೂ ಶಿಕ್ಷಕರು ಯಾವುದಾದರು ಒಂದು ಸಂಜೆ ಕರೆದುಕೊಂಡು ಹೋಗುತ್ತಿದ್ದರೂ ಹಾಗೆ ಹೋಗಿ ಬರುವುದರಲ್ಲಿ ನಮಗೆ, ಅಂದರೆ ಸೀನಿಯರುಗಳಿಗೆ ಹೊಸತೇನೂ ಇರಲಿಲ್ಲ. ರಾತ್ರಿ ಹನ್ನೆರಡು ದಾಟಿದಮೇಲೆ ಗುಂಪಾಗಿ ಕಂಪೌಂಡು ಹಾರಿ ಕಳ್ಳವಂಟಿಗೆಯಲ್ಲಿ ಹೋಗಿ ಪೇಟೆ ಸುತ್ತಿಬರುವುದರಲ್ಲೇ ಇತ್ತು ಅಸಲೀ ಮಜ. ನನಗೆ ಸರಿಯಾದ ಜೊತೆ ಯಾರೂ ಸಿಗದೇ ಒಂದನೇ ರಾತ್ರಿ ಹಾಗೇ ಕಳೆದುಹೋಯಿತು. ಸುಮ್ಮನಿದ್ದರೆ ಇದು ಆಗುವ ಕೆಲಸವಲ್ಲ ಎಂಬುದನ್ನು ಅರಿತ ನಾನು ಮರುದಿನ ಬೆಳಿಗ್ಗೆಯೇ ಗೆಳೆಯ ಕುಮಾರನ ಬಳಿ ಹೋದೆ ಹಾಗೂ ನನ್ನ ಪ್ಲ್ಯಾನನ್ನ್ನು ಅವನ ಎದುರಿಗಿಟ್ಟೆ. ನಮ್ಮ ಬ್ಯಾಚಿನ ಹುಡುಗರಲ್ಲೆಲ್ಲರಲ್ಲೂ ನನ್ನಂತೆಯೇ ಸೋ ಕಾಲ್ಡ್ ಡೀಸೆಂಟ್ ಬಾಯ್ ಆಗಿದ್ದ ಆತ ಮೊದಮೊದಲು ನಾನಂದುಕೊಂಡತೆಯೆ ಹೆದರಿದ ಹಾಗೂ ಬರಲು ನಿರಾಕರಿಸಿದ. ಆದರೆ ಅಷ್ಟು ಸುಲಭಕ್ಕೆ ನಾನು ಬಿಡುವವನಾ? ಸುಮಾರು ಅರ್ಧ ಗಂಟೆ ಪಂಪ್ ಹೊಡೆದು ಉಬ್ಬಿಸಿದಮೇಲೆ ಅಂತೂ ಇಂತೂ ಆಸಾಮಿ ಒಪ್ಪಿಕೊಂಡ.
ಅಂದು ರಾತ್ರಿ ಹನ್ನೆರಡಕ್ಕೆಲ್ಲ ಸರಿಯಾಗಿ ನಾವಿಬ್ಬರೂ ಕಂಪೌಂಡು ಗೋಡೆಯ ಬಳಿ ಇದ್ದೆವು. ಅದ್ಯಾವುದೋ ಹುಂಬ ಧೈರ್ಯದಲ್ಲಿ ಅವಶ್ಯಕತೆ ಇರುತ್ತದೆಂಬುದು ಗೊತ್ತಿದ್ದೂ ಇಬ್ಬರಲ್ಲಿ ಒಬ್ಬರೂ ಒಂದು ಟಾರ್ಚನ್ನೂ ತಂದಿರಲಿಲ್ಲ. ಕಂಪೌಂಡು ಸಮೀಪಿಸಿದಾಗ ಕತ್ತಲೆಯ ಅರಿವಾಗಿ ಸಣ್ಣ ಹೆದರಿಕೆಯೊಂದು ಶುರುವಾಗಿತ್ತು. ಆದರೂ ಇಲ್ಲಿಯತನಕ ಬಂದಿದ್ದಾಗಿದೆ, ಮತ್ತೆ ಅದನ್ನು ತರಲೆಂದು ವಾಪಸ್ ಹಾಸ್ಟೆಲಿಗೆ ಯಾವನು ಹೋಗುತ್ತಾನೆ? ಹೇಗಾದರೂ ಮುಂದೆ ಬೀದಿ ದೀಪಗಳಿರುತ್ತವೆ ಎಂದು ನಮಗೆ ನಾವೇ ಧೈರ್ಯ ಹೇಳಿಕೊಂಡು ಗೋಡೆ ಹತ್ತಿ ಆಚೆ ಹಾರಿಯೇಬಿಟ್ಟೆವು. ರಪ್ಪೆಂದು ಕೆಳಗೆ ಬಿದ್ದಿದ್ದೇ ತಡ, ಸದ್ದು ಕೇಳಿದ ಅಲ್ಲಿಯೇ ಇದ್ದ ಮನೆಯೊಂದರ ನಾಯಿ ತನಗೆ ಇದ್ದ ಶಕ್ತಿಯನ್ನೆಲ್ಲವನ್ನೂ ಒಗ್ಗೂಡಿಸಿ ಬೊಗಳಲಾರಂಭಿಸಿತು. ಇನ್ನು ತಡಮಾಡಿದರೆ ಮನೆಯ ಯಜಮಾನ ದೊಣ್ಣೆ ಹಿಡಿದು ಹೊರಗೆ ಬಂದಾನು ಎಂದುಕೊಂಡ ನಾವಿಬ್ಬರೂ ಒಂದೇ ಉಸಿರಿಗೆ ಅಲ್ಲಿಂದ ಕಾಲುಕಿತ್ತಿದ್ದೆವು. ಹಾಗೆ ಓಡುತ್ತಲೇ ಸುಮಾರು ಒಂದು ಫರ್ಲಾಂಗ್ ಕ್ರಮಿಸಿದ್ದೆವೇನೋ, ಆಗ ಎದುರಾಗಿತ್ತು ಆಲದಮರ. ತನ್ನ ಅಸಂಖ್ಯ ಬಿಳಲುಗಳನ್ನು ನೆಲದ ಮೇಲೆಲ್ಲ ಹರಿಯಬಿಟ್ಟು ಕತ್ತಲೆಯಲ್ಲಿ ಗುಮ್ಮನಂತೆ ನಿಂತಿದ್ದ ಆ ಮಹಾಗಾತ್ರದ ಆಲದಮರದಲ್ಲಿ ಪ್ರೇತಾತ್ಮಗಳಿರುತ್ತವೆ ಎಂದು ಹಾಸ್ಟೆಲ್ಲಿನಲ್ಲಿ ಯಾರೋ ತಮಾಷೆಗೆ ಹೇಳಿದ್ದು ನೆನಪಾಯಿತು. ಹೇಳಿದ್ದು ತಮಾಷೆಗೆಂಬ ಅರಿವಿದ್ದರೂ ಆ ಕ್ಷಣಕ್ಕೆ ನಾವಿಬ್ಬರೂ ನಿಜವಾಗಿ ಮೈತುಂಬ ಬೆವರಲಾರಂಭಿಸಿಬಿಟ್ಟಿದ್ದೆವು. ದಾರಿಯಲ್ಲಿ ಸ್ವಲ್ಪ ಹಿಂದೆ ಕಳೆದಿದ್ದ ಬೀದಿ ದೀಪದ ಕ್ಷೀಣ ಬೆಳಕು ಅಲ್ಲಿಯೂ ಹರಡಿತ್ತು. ಅದೇ ಬೆಳಕಿನಲ್ಲಿಯೇ ಮರದ ಎದುರಿಗೇ ಇದ್ದ ದಾರಿಯನ್ನೊಮ್ಮೆ ಸರಿಯಾಗಿ ನೋಡಿಕೊಂಡೆವು. ಹಾಗೆಯೇ ಕಣ್ಣುಮುಚ್ಚಿ ಜನಿವಾರವನ್ನು ಕೈಯಲ್ಲಿ ಹಿಡಿದು ಸಟಸಟನೆ ನಡೆಯುತ್ತಲೇ ಇದ್ದವರು ನಿಂತದ್ದು ಕುಮಾರ ಕಲ್ಲೊಂದನ್ನು ಎಡವಿ ಬಿದ್ದು ಕೂಗಿಕೊಂಡಾಗಲೇ. ಪುಣ್ಯಕ್ಕೆ ಅಷ್ಟರಲ್ಲಾಗಲೇ ನಾವು ಆಲದಮರವನ್ನು ದಾಟಿ ಸುಮಾರು ದೂರ ಬಂದಾಗಿತ್ತು  ಮತ್ತು ಕುಮಾರನಿಗೆ ದೊಡ್ಡದೆಂಬಂತಹ ಗಾಯವೇನೂ ಆಗಿರಲಿಲ್ಲ. ಅಲ್ಲಿಯೇ ಸ್ವಲ್ಪ ಹೊತ್ತು ಕೂತು ಸುಧಾರಿಸಿಕೊಂಡಮೇಲೆ ಸಾವಕಾಶ ಮುಖ್ಯರಸ್ತೆ ತಲುಪಿದೆವು.
ಇನ್ನೂ ಒಂದೂವರೆ ಕಿಲೋಮೀಟರ್ ನಡೆಯಬೇಕು ಮಳಗಿ ತಲುಪಲು. ಆದರೆ ರಸ್ತೆ ಬೀದಿ ದೀಪಗಳಿಂದ ಬೆಳಕಾಗಿದ್ದುದರಿಂದ ಹಾಗೂ ನಾವು ಶಾಲೆ ಕಳೆದು ಆಗಲೇ ತುಂಬ ದೂರ ಬಂದಿದ್ದೆವಾದ್ದರಿಂದ ಜಾತ್ರೆ ನಡೆಯುತ್ತಿದ್ದ ಜಾಗ ತಲುಪುವಲ್ಲಿ ನಮಗೆ ಯಾವುದೇ ತೊಂದರೆ, ಹೆದರಿಕೆ ಆಗಲಿಲ್ಲ. ಅಷ್ಟೆಲ್ಲ ಪಾಡು ಪಟ್ಟು ಜಾತ್ರೆಗೆ ಹೋಗಿ ನಾವು ಮಾಡಿದ್ದೇನು? ಏನಾದರೂ ಮಾಡಲಿಕ್ಕೆ ಆ ಅಪರಾತ್ರಿಯಲ್ಲಿ ಇದ್ದದ್ದಾದರೂ ಏನು? ಒಂದು ಮೂಲೆಯ ಟೆಂಟಿನಲ್ಲಿ ನಾಟಕ ನಡೆಯುತ್ತಿತ್ತು, ಟಿಕೇಟು ತೆಗೆದುಕೊಂಡು ಕೂತು ಬೆಳಗಿನತನಕ ನೋಡುವ ಸ್ಥಿತಿಯಲ್ಲಿ, ವ್ಯವಧಾನದೊಡನೆ ನಾವಿರಲಿಲ್ಲ. ಅಲ್ಲಲ್ಲಿ ಗುಂಪುಗಳಲ್ಲಿ ಜನ ಜುಗಾರಿ ಆಡುತ್ತಿದ್ದರು. ಹತ್ತಿರ ಹೋಗಿ ನೋಡಿದರೆ ನಮ್ಮ ಶಾಲೆಯ ಜವಾನನೊಬ್ಬನೂ ಜೋರು ಆಟದಲ್ಲಿ ನಿರತನಾಗಿದ್ದಾನೆ. ರಾತ್ರಿಯಲ್ಲೂ ಬಾಗಿಲು ತೆರೆದಿದ್ದ ಮಿಠಾಯಿ ಅಂಗಡಿಯೊಂದರಲ್ಲಿ ಏನನ್ನೋ ಕೊಂಡು ತಿಂದೆವು ಮತ್ತು ಹಾಸ್ಟೆಲ್ಲಿನಲ್ಲಿ ತಿನ್ನಲೆಂದು ಮತ್ತಿಷ್ಟು ಕಟ್ಟಿಸಿಕೊಂಡೆವು. ಉತ್ಸಾಹ ಬಾಕಿ ಇತ್ತಾದ್ದರಿಂದ ಇನ್ನೂ ಅರ್ಧಗಂಟೆ ಎಲ್ಲೆಲ್ಲೋ ತಿರುಗುತ್ತಿದ್ದೆವು. ಹಾಗೆ ತಿರುಗುತ್ತಿದ್ದಾಗಲೇ ನಮ್ಮಂತೆಯೇ ಹಾಸ್ಟೆಲ್ಲಿನಿಂದ ಬೇರೆಬೇರೆ ಗುಂಪಿನ ಜೊತೆ ಭೇಟಿಯೂ ಆಯಿತು. ಎಲ್ಲ ಗುಂಪಿನವರ ಮುಖದಲ್ಲೂ ನನ್ನನ್ನು ಮತ್ತು ಕುಮಾರನನ್ನು ಕಂಡು ಏನೋ ಅನಿರೀಕ್ಷಿತವಾದುದನ್ನು ಕಂಡ ಭಾವನೆ ಪ್ರಕಟವಾಗುತ್ತಿತ್ತು. ವಾಚು ನೋಡಿದರೆ ಗಂಟೆಯ ಮುಳ್ಳು ಆಗಲೇ ಮೂರರ ಕಡೆ ಮುಖಮಾಡಿದೆ. ಇನ್ನು ತಡಮಾಡಿದರೆ ಆಪತ್ತು ಖಚಿತ ಎಂದುಕೊಳ್ಳುತ್ತ ಶಾಲೆಯ ದಾರಿ ಹಿಡಿದೆವು ನಾವಿಬ್ಬರೂ.
ಅದೇಕೋ ಹಿಂತಿರುಗಿ ಬರಬೇಕಾದರೆ ಅದೇ ಆಲದಮರವನ್ನು ದಾಟಿ ಬಂದರು ಒಂದು ಚೂರೂ ಹೆದರಿಕೆಯಾಗಲೇ ಇಲ್ಲ. ಇಪ್ಪತ್ತು ನಿಮಿಷ ಕಳೆಯುವುದರೊಳಗೆ ಮತ್ತೆ ಕಂಪೌಂಡ್ ಗೋಡೆಯ ಬಳಿ ತಲುಪಿಯಾಗಿತ್ತು ನಾವು. ಇನ್ನೇನು ಹತ್ತಿ ಹಾರುವುದೊಂದೇ ಬಾಕಿ. ನಾನೇ ಮೊದಲು ಹತ್ತುತ್ತೇನೆಂದು ಹತ್ತಿ ಗೋಡೆಯ ಮೇಲೆ ನಿಂತಿದ್ದಾಗಲೇ ಸರಿಯಾಗಿ ನನ್ನ ಮುಖದ ಮೇಲೆ ಪ್ರಖರವಾದ ಟಾರ್ಚ್ ಬೆಳಕು ಬಿದ್ದಿತು. ಆಯಿತು, ನಮ್ಮ ಕಥೆಯಿನ್ನು ಮುಗಿಯಿತು. ಈ ಟಾರ್ಚ್ ಬೆಳಕು ಬಿಟ್ಟಿದ್ದು ಯಾರೋ ಗೂರ್ಖಾನೇ ಎಂಬುದು ಖಚಿತವಾದೊಡನೆಯೇ ನಾನು ಒಳಹಾರಿ ಎದ್ದು ಬಿದ್ದು ಓಡಲಾರಂಭಿಸಿದೆ. ಕುಮಾರ ಗೋಡೆ ಹತ್ತಲೇ ಇಲ್ಲ. ಆಗ ಕೇಳಿಸಿತು, "ನಿಲ್ಲಲೇ! ಹಂಗ್ಯಾಕೆ ಓಡ್ತೀ?" ಥಟ್ಟನೆ ಆ ಧ್ವನಿ ಯಾರದೆಂದು ಗೊತ್ತಾಗಿಹೋಯಿತು ನನಗೆ. ಅವನೇ, ರಮಾಕಾಂತ. ನನ್ನ ಮತ್ತೊಬ್ಬ ಗೆಳೆಯನಾಗಿದ್ದ ಆತ ಬೇರೊಂದು ದಾರಿಯಲ್ಲಿ ಅವನ ಗುಂಪಿನವರೊಡನೆ ಸರಿಯಾಗಿ ನಾವು ಬಂದ ಹೊತ್ತಿಗೇ ವಾಪಸ್ ಬಂದಿದ್ದ ಹಾಗೂ ನನ್ನನ್ನು ಕಂಡು ಮುಖದ ಮೇಲೆ ಬೆಳಕು ಬಿಟ್ಟಿದ್ದ. ಅಬ್ಬ! ನನಗೆ ಹೋದ ಜೀವ ಬಂದಂತಾಯಿತು. ರಮಾಕಾಂತ ಸಣ್ಣದಾಗಿ ಕುಹಕ ನಗುತ್ತಿದ್ದ. ಕುಮಾರ ಇದೆಲ್ಲ ನಡೆಯುತ್ತಿದ್ದಾಗಲೇ ಮೆಲ್ಲನೆ ಒಳಬಂದಿದ್ದ.
ಎಲ್ಲ ನಡೆದು ಸುಮಾರು ಏಳು ವರ್ಷವಾಗಿದ್ದರೂ ಮೊನ್ನೆಮೊನ್ನೆ ನಡೆದಂತೆ ನೆನಪುಗಳು ಹಸಿರಾಗೇ ಇವೆ ಮತ್ತು ಹಾಗೇ ಇರುತ್ತವೆ ಕೂಡ. ನಾವು ಮಾಡಿದ ಕೆಲಸ ಅಂದು ನಮಗೆ ಹೆಮ್ಮೆಯ ವಿಷಯವೇ ಆಗಿತ್ತಾದರೂ ಮುಂದಿನ ವರ್ಷಗಳಲ್ಲಿ ನಾನು ಮಾಡಿದ್ದು ತಪ್ಪೆಂಬ ಅರಿವಾಗಿದೆ. ಆದರೆ ತಪ್ಪುಗಳನ್ನೇ ಮಾಡದ, ರೂಲ್ಸುಗಳನ್ನೇ ಬ್ರೇಕ್ ಮಾಡದ ಜೀವನವಾದರೂ ಅದೆಂಥ ಜೀವನ?  

Sunday, 15 April 2012

ಕವನ

ಬರೆಯಲು ಶುರುಮಾಡಿದ ಮೇಲೆ ಕಥೆ ಬೇರೆ ಅಲ್ಲ ಕವನ ಬೇರೆ ಅಲ್ಲ ಎಂಬುದು ನನ್ನ ಅಭಿಪ್ರಾಯ. ಇತ್ತೀಚಿಗೆ ರಚಿಸಿದ ಕವನವೊಂದು ನಿಮ್ಮ ಮುಂದಿದೆ.


ನೀ ಹೋದ ನಂತರದ ನಾನು 


ಅದೋ,
ಕಿಟಕಿಯಾಚೆಯಿಂದ ಕೇಳಿದೆ
ಒಳಬಂದು ತೊಯ್ಯಿಸಲೇ ಎಂದು
ಕಾಯಿಸಿ ಸುರಿದ ಮೊದಲ ಮಳೆ
ಮುಸುಕು ತೆಗೆದೆದ್ದ ಭಾವನೆಗಳೆಲ್ಲ
ಈಗ ವೇಷಕಟ್ಟಿ ಮೂರ್ತ
ಸ್ವಗತದಲ್ಲೆ ಸಂಭಾಷಿಸಿ
ನನ್ನಿಡಲೇಕೆ ದೂರ?
ನಿನ್ನ ಮೌನವನ್ನೂ
ಆಲಿಸಬಲ್ಲೆ ನಾನು


ನೀನಿಟ್ಟ ಹೆಜ್ಜೆಯಡಿಯ ಮರಳಲ್ಲಿ
ಮನೆಯೊಂದ ಕಟ್ಟಿ
ಬದುಕಲು ಕರೆದಿದ್ದೆ ನಿನ್ನ
ಆದರೆ ನೀ ಬರುವ ಮೊದಲೇ
ಮತ್ತೆ ಮಳೆ ಬಂದುಬಿಟ್ಟಿತು

ಮನದ ಮರೆಯಲಿ ಅವಿತೆ
ಕಣ್ಣು ರಚಿಸಿದ ಕವಿತೆ
ನಿನ್ನೆದುರು ಓದುವಷ್ಟರಲ್ಲಿ
ತಾನೇ ಕಣ್ಣೀರಾಗಿ ಧರೆಗಿಳಿಯಿತು

ನನ್ನ ಬಾಗಿಲಾಚೆಯ
ನನ್ನದಲ್ಲದ ಜಗತ್ತು
ನಿನ್ನದೂ ಅಲ್ಲವೆಂಬ ಸತ್ಯ
ಹುಡುಗೀ,
ನಿನಗೇಕೆ ತಿಳಿಯಲಿಲ್ಲ? 

Monday, 2 April 2012

ಮತ್ತೊಂದು ಕಥೆ.


ಪ್ರೀತಿಯೆಂಬುದು....

            ನಡುರಾತ್ರಿಗಿನ್ನೊಂದು ಐದು ನಿಮಿಷ ಬಾಕಿಯಿರಬಹುದು. ರಾಮಕೃಷ್ಣ ಕುಮಟೆಯಿಂದ ಹೊನ್ನಾವರಕ್ಕೆ ಹೊರಟ ಯಾವುದೋ ಎಕ್ಸ್ ಪ್ರೆಸ್ ಬಸ್ಸು ಹತ್ತಿ ಡ್ರೈವರನ ಹತ್ತಿರ ಕೇಳಿಕೊಂಡು ರಾಮತೀರ್ಥದಲ್ಲೇ ಇಳಿದು ಭಸಭಸನೆ ನಡೆಯಲು ಶುರುಮಾಡಿ ಆಗಲೆ ಮುಕ್ಕಾಲು ಗಂಟೆಯ ಮೇಲಾಗಿತ್ತು. ಮನೆ ಇನ್ನೇನು ಒಂದು ಕಿಲೋಮೀಟರ್ ಬಾಕಿ ಇರಬಹುದಷ್ಟೆ. ಇವತ್ತು ಗೆದ್ದದ್ದೆಷ್ಟು, ಬೇರೆಬೇರೆ ಖರ್ಚಾದಮೇಲೆ ಉಳಿದದ್ದೆಷ್ಟು ಎಂದು ನೋಟುಗಳನ್ನು ಕಿಸೆಯಿಂದ ತೆಗೆದು ಕತ್ತಲೆಯಲ್ಲೇ ಐದನೇ ಬಾರಿ ಲೆಕ್ಕಾಚಾರ ಮಾಡಿದ. ಹೀಗೆ ವಾರಕ್ಕೆರಡುಮೂರು ದಿನ ಕುಮಟೆಯ ಕ್ಲಬ್ಬಿಗೆ ಇಸ್ಪೀಟಾಡಲು ಹೋಗುತ್ತಿದ್ದ ರಾಮಕೃಷ್ಣ ಇವತ್ತಂತೂ ಭಾರೀ ಲಾಭದ ಮೇಲೇ ಇದ್ದ. ಹೆಚ್ಚುಕಮ್ಮಿ ಒಂದೂವರೆ ಸಾವಿರ ರೂಪಾಯಿ. ಹೊಗುವಾಗ ಕೈಲಿದ್ದದ್ದು ಇನ್ನೂರು. ಅಷ್ಟಷ್ಟು ದಿವಸಕ್ಕೊಮ್ಮೆ ಲುಕ್ಸಾನು ಅನುಭವಿಸಿದರೂ ಇತ್ತೀಚೆಗೆ ಹೆಚ್ಚಾಗಿ ಆಟ ಕೈಗೆ ಹತ್ತುತ್ತಿದ್ದರಿಂದಾಗಿಯೇ ನಮ್ಮ ರಾಮಕೃಷ್ಣ ರಾಮಕೃಷ್ಣ ಹೋಗಲಾಗಿ ಕ್ಲಬ್ಬಿನಲ್ಲೆಲ್ಲ ಆರ್ ಕೆ ಹೆಗಡೆಯವರಾಗಿ ಪ್ರಸಿದ್ಧನಾಗತೊಡಗಿದ್ದು ಮತ್ತು ತಿಂಗಳಿಗೊಂದಾವರ್ತಿ ವಾರಕ್ಕೆರಡು ಸರ್ತಿಯಾಗಿದ್ದು.
            ರಾಮಕೃಷ್ಣನದು ಹೇಳಿಕೊಳ್ಳುವಷ್ಟೇನೂ ಆಸ್ತಿ ಹೊಂದಿರದ ಮಧ್ಯಮ ವರ್ಗದ ಒಂದು ಅವಿಭಾಜ್ಯ ಕುಟುಂಬ. ಅಪ್ಪ ಕಾಲವಾದಮೇಲೆ ತಾನೇ ಪಾಲಿನ ತಕರಾರೆತ್ತಿದರೂ ಅಣ್ಣ ಸುರೇಶನ ಕುತಂತ್ರದಿಂದಾಗಿ ಪಂಚಾಯಿತಿಗೆಯು ಪಾಲುಮಾಡುವ ನಿರ್ಣಯದಲ್ಲದೆ ಕೇವಲ ಸಣ್ಣಮಟ್ಟದ ಚಾಪಾರ್ಟಿಯಾಗಿ ಕೊನೆಗೊಂಡಿದ್ದನ್ನು ಕಂಡು ಬೇಸತ್ತಿದ್ದ. ಎಲ್ಲರೂ ಆದಂತೆ ಮದುವೆಯೊಂದನ್ನಾಗಿ ಎರಡು ಮಕ್ಕಳನ್ನೂ ಮಾಡಿದ್ದ. ಹೆಂಡತಿ ಜಲಜೆ, ಹಿರಿಮಗಳು ಅಖಿಲಾ, ಕಿರಿಯವಳು ನಿಖಿಲಾ. ನಿಜಹೇಳಬೇಕೆಂದರೆ ಪಾಲಿನ ಮಾತೆತ್ತಲು ಕುಮ್ಮಕ್ಕು ಕೊಟ್ಟವಳು ಜಲಜೆಯೇ ಎಂದು ಕೇರಿಯ ಕೆಲವರ ಅನುಮಾನ. ಒಟ್ಟಾರೆ ವಿಷಯವಿಷ್ಟೆ, ಆತನಿಗೆ ತನ್ನದೇ ಆದ ಬೇರೆ ಆದಾಯ ಅಂತ ಒಂದಿರಲಿಲ್ಲ. ಆದ್ದರಿಂದಲೇ ಮೊದಲಿನಿಂದಲೂ ಹೊಸಾಕುಳಿ ತೇರಿನಲ್ಲಿ ಜುಗಾರಿ ಆಡಿ ಇದ್ದ ಅನುಭವವನ್ನು ನಂಬಿಕೊಂಡು ಆತ ರಾತ್ರಿಗಳಲ್ಲಿ ಕುಮಟೆ ಬಸ್ಸು ಹತ್ತಲಾರಂಭಿಸಿದ.
            ರಾಮಕೃಷ್ಣ ಅವನಿಗನ್ನಿಸಿದಂತೆ ಕತ್ತಲಿಗೆ ಅಷ್ಟೇನು ಹೆದರುವವನಲ್ಲ, ಆದರೂ ಮೂರುಸಂಜೆಯ ವೇಳೆ ಮನೆಯಿಂದ ಒಂದು ಸೂಡಿ ಕಟ್ಟಿಕೊಂಡೇ ಹೊರಡುವುದು ಅಭ್ಯಾಸವಾಗಿಬಿಟ್ಟಿತ್ತು. ಸಂತೆಗುಳಿಯಲ್ಲಿ ಬಸ್ಸು ಹತ್ತುವ ಜಾಗದ ಬಳಿಯ ಹಿಂಡಿನ ಬದಿಯಲ್ಲಿ ಬಿಸಾಕಿಟ್ಟ ಅದನ್ನು ವಾಪಸ್ಸು ಬರುವಾಗ ಹೊತ್ತಿಸಿಕೊಂಡು ಬರುತ್ತಿದ್ದ. ಇಂದೂ ಕೂಡ ಹಾಗೆಯೇ ತಂದ ಸೂಡಿಯು ಸಮಾ ಮನೆಯೆದುರು ತಲುಪುವಷ್ಟರಲ್ಲಿ ಆರಿಹೋಗಿತ್ತು. "ಖರ್ಮ ತೀರಿತು ಇದರದ್ದು!" ಎನ್ನುತ್ತ ದಣಪೆ ದಾಟುತ್ತಿದ್ದಂತೆ ಪಕ್ಕದಲ್ಲಿದ್ದ ತೋಟದಲ್ಲಿ ಎಂತದೋ ಓಡಾಡಿದಂತೆ ಸರಭರ ಎಂದು ಸದ್ದಾಯಿತು. "ಸುಟ್ಟ ಹಂದಿಯದ್ದೇ ಕೆಲಸ", ಅಂಗಳ ತಲುಪಿ ಕಾಲಿಗೆ ನೀರುಬಿಟ್ಟುಕೊಳ್ಳುತ್ತ ಈ ಹಂದಿ ಸಮಸ್ಯೆಗೊಂದು ಪರಿಹಾರ ಆಲೋಚಿಸತೊಡಗಿದ. ವಿಪರೀತವಾಗಿತ್ತು ಇತ್ತೀಚೆಗಂತೂ, ಅಡಿಕೆಮರಕ್ಕೆ ಹಬ್ಬಿದ ಎಲೆಬಳ್ಳಿಗಳ ಬೇರುಗಳನ್ನು ಚೂರು ಬಿಡದೆ ಕಿತ್ತುಬಿಸಾಕುತ್ತಿದ್ದವು ಹಂದಿಗಳು. ಹೀಗಾದರೆ ಮಾರುವುದಕ್ಕೆ ಹೋಗಲಿ ಮನೆಯಲ್ಲಿ ಕವಳ ಹಾಕಲಿಕ್ಕೂ ಎಲೆ ಸಿಗುವುದು ಕಷ್ಟವಿತ್ತು.
            ಮಾರನೇ ದಿನ ಬೆಳಿಗ್ಗೆ ರಾಮಕೃಷ್ಣ ತೋಟಕ್ಕೆ ಹೋದವ ಹಾಗೆ ಪಕ್ಕದ ಗೌಡರಕೇರಿಯ ಗಳಿಯಣ್ಣನ ಮನೆಯ ಕಡೆ ನಡೆದ. "ವಡಿದೀರು ಆರಾಮಾ?", ಕೇಳುತ್ತ ಗಳಿಯಣ್ಣ ಬಾಳೆಚೂರಿನಲ್ಲಿ ಅವನ ಹೆಂಡತಿ ತಂದಿಟ್ಟ ಬಾಳೆಹಣ್ಣು ಸಕ್ಕರೆಯನ್ನು ಮುಂದುಮಾಡಿದ. ಅವನಿಗೆ ಗೊತ್ತಿತ್ತು, ಹೆಗಡೇರು ಯಾವುದೇ ಮುಖ್ಯವಾದ ಕೆಲಸವಿಲ್ಲದೆ ತನ್ನ ಮನೆಗೆಲ್ಲ ಬರುವವರಲ್ಲ ಎಂದು. ವಿಷಯವೇನೆಂದು ಕೇಳುವ ಮೊದಲೇ ಮಾತಿಗಿಟ್ಟುಕೊಂಡ ರಾಮಕೃಷ್ಣ, "ಹಂದಿಕಾಟ ಸಿಕ್ಕಾಪಟ್ಟೆ ಆಗಿದೆ ಮಾರಾಯ ಈಗಿತ್ಲಾಗೆ, ಕೋವಿ ವ್ಯವಸ್ಥೆ ಮಾಡಿದರೆ ಬಂದು ಹೊಡೆದುಕೊಡುತ್ತೀಯಾ ಹೇಗೆ?", ಕೇಳಿದ ಬಾಳೆಹಣ್ಣನ್ನು ಸುಲಿಯುತ್ತ. ಗಳಿಯಣ್ಣ "ನೀವು ಕೇಳುವುದು ಹೆಚ್ಚಾ ನಾನು ಬರುವುದಾ? ಇವತ್ತು ರಾತ್ರಿಯೇ ಕೆಲಸ ಮುಗಿಸಿಬಿಡುವ" ಎಂದು ತನ್ನ ಸಮ್ಮತಿ ಸೂಚಿಸಿದ. ಅಲ್ಲಿಗೆ ಹಂದಿಬೇಟೆ ಕಾರ್ಯಕ್ರಮದ ಮೊದಲ ಹಂತ ಮುಗಿದಂತೆ. ಕಮತೀರ ಮನೆಯಲ್ಲಿ ಕೋವಿಯಿದೆ. ಕೋವಿಯೆಂದರೆ ತೋಟಾಕೋವಿಯಲ್ಲ, ಶೆಲ್ಲಿನದು. ಸೈನಿಕರು ಬಳಸುತ್ತಾರಲ್ಲ, ಅಂಥದ್ದು. ಒಂದೇ ಹೊಡೆತ, ಯಾವ ಹಂದಿಯಾದರೂ ಸತ್ತುರುಳಬೇಕು, ಹಾಗಿತ್ತು ಅದರ ಪ್ರಭಾವ. ಹೊಡೆದ ಹಂದಿಯ ಮಾಂಸದಲ್ಲಿ ತನಗೊಂದು ಸಣ್ಣ ಪಾಲು ಹಾಗು ಕೋವಿ ಗುಂಡಿನ ಖರ್ಚು ತನ್ನ ಕೈಮುಟ್ಟುವುದು ಖಾತ್ರಿಯಾದಮೇಲೆ ಮಾತ್ರ ಮಾಲಿಕನಾದ ರಾಮಚಂದ್ರ ಕಮತಿ ಕೋವಿಯನ್ನು ಬಳಸಲು ಬಿಡುವುದು. ಮಧ್ಯಾಹ್ನದ ಊಟ ಮುಗಿಸಿ ಅವನ ಮನೆಗೆ ಹೋಗಿದ್ದ ರಾಮಕೃಷ್ಣ ಸುಮಾರುಹೊತ್ತಿನ ಮಾತುಕತೆಯ ಮೇಲೆ ಕೋವಿಯನ್ನು ಹೊತ್ತುಕೊಂಡೇ ವಾಪಸು ಬಂದಿದ್ದ.
             ಸೂರ್ಯ ಕಂತಿದ. ಕರೆಂಟಿರುವವರ ಮನೆಯಲ್ಲಿ ಟ್ಯೂಬುಲೈಟುಗಳು ಮತ್ತು ಬಲ್ಬುಗಳೂ, ಇಲ್ಲದವರ ಮನೆಯಲ್ಲಿ ಸೀಮೆಎಣ್ಣೆ ಬುರುಡೆಗಳೂ ಬೆಳಗಿದವು. ಹೇಳಿದ ಸಮಯಕ್ಕೆ ಸರಿಯಾಗಿ ಗಳಿಯಣ್ಣ ರಾಮಕೃಷ್ಣನ ಮನೆಗೆ ಬಂದ. ಅವನ ಊಟ ಅವರ ಮನೆಯಲ್ಲೇ ಆಯಿತು. ವಿಷಯ ಅಷ್ಟುಹೊತ್ತಿಗೆ ಸುರೇಶನಿಗೂ ತಿಳಿದಿತ್ತು. ಸಮ್ಮತಿಯಿಂದೆಂಬಂತೆ ಊಟವಾದಮೇಲೆ ತಾನೇ ಗಳಿಯಣ್ಣನಿಗೆ ಕವಳ ಕೊಡುತ್ತ "ಹೊಡೆದ ಹಂದಿಯನ್ನು ಅಲ್ಲೇ ಮನೆಗೆ ತೆಗೆದುಕೊಂಡು ಹೋಗಿಬಿಡು, ರಗಳೆ ಮುಗಿದುಹೋಗಲಿ" ಎಂದ. "ಹಾಂಗೆ ಆಗಲಿ ವಡೆಯಾ", ಕೋವಿಯನ್ನು ಹೆಗಲಿಗೇರಿಸಿ, ಅಂಡಿನ ಬಳ್ಳಿಗೆ ಕತ್ತಿಯನ್ನು ಸಿಗಿಸಿಕೊಂಡು ಮತ್ತೆರಡು ಕವಳಕ್ಕಾಗುವಷ್ಟು ಎಲೆ ಅಡಿಕೆ ತೆಗೆದುಕೊಂಡು ಅಂಗಳ ದಾಟಿ ಕತ್ತಲೆಯಲ್ಲಿ ಕರಗಿ ನಡೆದ.
            ರಾತ್ರಿ ಏನು ನಡೆಯಿತೋ ದೇವರಿಗೇ ಗೊತ್ತು, ಬೆಳಗಾಗುವಷ್ಟರಲ್ಲಿ ಗಳಿಯಣ್ಣನ ಹೆಣ ಹಳ್ಳದ ಬದಿಯಲ್ಲಿ ಅನಾಥವಾಗಿ ಬಿದ್ದಿತ್ತು. ಕೋವಿಯಿಂದ ಹಾರಿದ ಗುಂಡಿನ ಕುರುಹಾಗಿ ಶೆಲ್ಲಿನ ಮೇಲಿನ ಸಿಪ್ಪೆ ಹೆಣದ ಪಕ್ಕದಲ್ಲಿ ಬಿದ್ದಿತ್ತು. ಆದರೆ ಹಂದಿಯ ಸುಳಿವಿಲ್ಲ, ತೋಟದಲ್ಲೆಲ್ಲೂ ಹಂದಿಯ ಹೆಜ್ಜೆಗುರುತೂ ಇಲ್ಲ. ಹಾಗಾದರೆ ಗಳಿಯಣ್ಣ ತನಗೆ ತಾನೇ ಗುಂಡಿಟ್ಟುಕೊಂಡನೇ? ಇಲ್ಲ, ಅವನ ಮೈಮೇಲೆ ಯಾವುದೇ ಗಾಯವಾದಹಾಗಿಲ್ಲ. ಆಗಿದ್ದು ಆಗಿಯಾಯಿತು, ಸತ್ತವನು ಹಿಂದಿರುಗಿ ಬರಲಾರ. ಅವನ ಹೆಂಡತಿ ಹುಚ್ಚು ಹಿಡಿದವಳಂತೆ ರೋದಿಸಿದ್ದಳು, ಮಗಳು ಭುವನೆಯನ್ನುದ್ದೇಶಿಸಿ "ಹೋದನಲ್ಲೇ, ನಿನ್ನಪ್ಪ ಹೇಳುವವನೊಬ್ಬ ಹೋದನಲ್ಲೇ" ಎಂದು ಪದೇಪದೇ ಕಿರುಚುತ್ತ. ಅಪ್ಪ ಹೋಗಿದ್ದಕ್ಕೆ ಆಕೆಗೆ ಅಷ್ಟೇನೂ ದುಃಖವಾಗಿರಲಿಲ್ಲ, ಆದರೂ ಅಳದೇಹೋದರೆ ಅವ್ವಿಗೆ ದುಃಖವಾಗಬಹುದೆಂದು ಹೆದರಿ ನಾಲ್ಕು ಹನಿ ಕಣ್ಣೀರನ್ನು ತಾನೂ ಚೆಲ್ಲಿದ್ದಳು. ಒಟ್ಟಾರೆ ಸಾವಿನ ಹೊಣೆಗಾರ ಪಾಪದ ರಾಮಕೃಷ್ಣನಾದ. ಸಹಜವಾಗಿ ಕನಿಕರವೂ ಉಕ್ಕಿತ್ತು ಅವನಿಗೆ. ಸುರೇಶನೂ ಒಪ್ಪಿಕೊಂಡಮೇಲೆ ಧನಸಹಾಯ ಅಂತ ಎಷ್ಟೋ ಒಂದಿಷ್ಟು ದುಡ್ಡೂ ಕೊಟ್ಟಾಯಿತು. ಗಳಿಯಣ್ಣ ಸತ್ತ ಮೇಲೆ ಸಂಸಾರದ ಸ್ಥಿತಿಗತಿ ಹೇಗಿದೆ ಎಂದು ನೋಡಿಕೊಂಡು ಬರಲು ಹಾಗು ಸ್ವಲ್ಪ ಸಾಂತ್ವನದ ಮಾತಾಡಿಬರಲು ಸುರೇಶನ ಮಗ ಲಕ್ಷ್ಮೀನಾರಾಯಣ ಅಷ್ಟಷ್ಟು ದಿನಕ್ಕೊಮ್ಮೆ ಹೋಗಿಬರುವುದೆಂದು ಮನೆಯಲ್ಲಿ ಆಗ್ರಹವಾಗಿದ್ದು ಈ ಕೆಲಸ ಆತನಿಗೆ ಮೊದಮೊದಲು ಬೇಜಾರು ತರಿಸಿದ್ದರೂ ಈಗೀಗ ಅವರ ಮನೆಗೆ ಹೋಗದಿದ್ದರೆ ಬೇಜಾರು ಬರುವಂತಾಗಿತ್ತು. ಇದಕ್ಕೆಲ್ಲ ಕಾರಣ ಅವನ ಮತ್ತು ಭುವನೆಯ ನಡುವೆ ಹುಟ್ಟಿಕೊಂಡ ಪ್ರೇಮವೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರೇಮ ಕರುಣೆಯಿಂದ ಹುಟ್ಟಿತೇ ಅಥವ ಬೇರೆ ಯಾವುದರಿಂದಲಾದರೂ ಇರಬಹುದೇ ಎಂದು ಲಕ್ಷ್ಮೀನಾರಾಯಣ ತಲೆಕೆಡಿಸಿಕೊಂಡವನಲ್ಲ. ಹೊನ್ನಾವರದ ಟಾಕೀಸಿನಲ್ಲಿ ನೋಡಿದ ಪಿಕ್ಚರುಗಳಲ್ಲಿನಂತೆಯೇ ಆಕೆಯನ್ನು ಪವಿತ್ರವಾಗಿ ಪ್ರೇಮಿಸಿದ್ದನಷ್ಟೆ.
            ಈ ನಮ್ಮ ಲಕ್ಷ್ಮೀನಾರಾಯಣನೂ ಮತ್ತು ಭುವನೆಯೂ ಎರಡನೆ ವರ್ಷದ ಪೀಯೂಸಿ. ಅರೆಅಂಗಡಿ ಜ್ಯೂನಿಯರ್ ಕಾಲೇಜಿನಲ್ಲಿ ಒಟ್ಟಿಗೇ ಓದುತ್ತಿದ್ದರು. ಗಳಿಯಣ್ಣ ಅವನ ಜಾತಿಯ ಉಳಿದವರಿಗೆ ಹೋಲಿಸಿದರೆ ಬೆಳವಣಿಗೆಯ ಹಾದಿಯಲ್ಲಿ ಸ್ವಲ್ಪ ಮುಂದಿದ್ದ. ಕಲಿತು ತನ್ನ ಮಗಳು ಏನು ಮಾಡಬೇಕೆಂಬ ಅರಿವು ಆತನಿಗೆ ಬಾರದೆ ಇದ್ದರೂ ಒಡೆಯರ ಮನೆ ಮಕ್ಕಳು ಕಾಲೇಜಿಗೆ ಹೋಗುವುದನ್ನು ನೋಡಿ ಪ್ರೇರಿತಗೊಂಡಿದ್ದ. ಆದರೆ ತನ್ನ ಕನಸು ಸಾಕಾರಗೊಳ್ಳುವುದೋ ಇಲ್ಲವೋ ನೋಡಲು ನಿಲ್ಲಲಿಲ್ಲ ಅಷ್ಟೆ. ಭುವನೆ ಸುರೂಪಿಯಲ್ಲದಿದ್ದರೂ ಕುರೂಪಿಯಂತೂ ಅಲ್ಲವಾಗಿದ್ದಳು. ಅಷ್ಟಕ್ಕೂ ಪ್ರೀತಿ ಯಾರಿಗಾದರೂ ಯಾರಮೇಲಾದರೂ ಯಾವಾಗಲಾದರೂ ಮೂಡಬಹುದು. ಅವನು ಬೆಳಿಗ್ಗೆ ಕಾಲೇಜಿಗೆ ಬರಬೇಕಾದರೆ ಬೇಣದಲ್ಲಿ ಕಾಸಿನಮರ ಹತ್ತಿ ಸೀತಾದಂಡೆಯನ್ನು ಕೊಯ್ದು ಅವಳಿಗೆ ತರುತ್ತಿದ್ದ. ಎರಡು ಪೀರಿಯಡ್ಡುಗಳು ಮುಗಿದಮೇಲೆ ಬಿಡುವ ವಿರಾಮದ ಸಮಯದಲ್ಲಿ ಅದು ಭುವನೆಯ ಮುಡಿಯಲ್ಲಿ ಕುಳಿತು ಅವಳ ಕಣ್ಣಿನೊಂದಿಗೆ ನಗುತ್ತಿತ್ತು. ಒಂದೊಂದು ದಿನ ಲಕ್ಷ್ಮೀನಾರಾಯಣ ಆಕೆಯನ್ನು ಸೈಕಲ್ ಮೇಲೆ ಡಬಲ್ ಮಾಡಿ ಸಂತೆಗುಳಿಯ ತನಕ ಕರೆದೊಯ್ಯುವುದೂ ಉಂಟು.
            ಹೀಗೆ ಪ್ರೀತಿಸಿ ಮುಂದೇನು ಮಾಡುತ್ತೇನೆಂಬ ಭವಿಷ್ಯದ ಆಲೋಚನೆ ಲಕ್ಷ್ಮೀನಾರಾಯಣನನ್ನು ಯಾವತ್ತೂ ಬಾಧಿಸಿದ್ದಿಲ್ಲ, ಸುಮ್ಮನೆ ಆತ ಆಕೆಯನ್ನೂ ಆಕೆ ಆತನನ್ನೂ ಉದ್ದಕ್ಕೆ ಪ್ರೀತಿಸಿಕೊಂಡು ಬಂದಿದ್ದರು. ಎಲ್ಲವೂ ಸಾಂಗವಾಗಿ ನಡೆದಿರಲು ಒಂದು ದಿನ ಲಕ್ಷ್ಮೀನಾರಾಯಣ ಸೀತಾದಂಡೆ ಕೊಯ್ಯುತ್ತಿರಬೇಕಾದರೆ ಅಲ್ಲೇ ಪಕ್ಕದಲ್ಲಿ ಸೊಪ್ಪು ಕೊಯ್ಯುತ್ತಿದ್ದ ಚಿಕ್ಕಪ್ಪ ರಾಮಕೃಷ್ಣ ಅದನ್ನು ನೋಡಿಬಿಟ್ಟ. ಸಣ್ಣವನಿರುವಾಗಿಂದಲೂ ನಾರಾಯಣನಿಗೆ ಅಪ್ಪಚ್ಚಿಯ ಜೊತೆ ಸಲಿಗೆ ಹೆಚ್ಚು. ಆದರೂ ಪ್ರೀತಿಯ ವಿಷಯವನ್ನದೇಕೋ ಮುಚ್ಚಿಟ್ಟಿದ್ದ. ಏನೂ ಕೇಳದಿದ್ದರೆ ಸಾಕಪ್ಪ ದೇವರೇ ಎಂದುಕೊಳ್ಳುತ್ತಿರುವಷ್ಟರಲ್ಲೇ "ಹುಡುಗಿ ಯಾರೋ ಕುಮಾರಕಂಠೀರವ?", ಕೇಳಿಯೇಬಿಟ್ಟ ಅಪ್ಪಚ್ಚಿ. ಇನ್ನು ಬೇರೆ ದಾರಿಯಿಲ್ಲವೆಂದುಕೊಂಡ ಉದಯೋನ್ಮುಖ ಪ್ರೇಮಿ ವೃತ್ತಾಂತವನ್ನು ಸವಿವರವಾಗಿ ಬಿಚ್ಚಿಟ್ಟ. "ಥತ್! ಎಂಥ ಕೆಲಸ ಮಾಡಿಕೊಂಡೆಯೋ... ತಡೆ ಸ್ವಲ್ಪ ಆಲೋಚನೆ ಮಾಡಿ ಇದಕ್ಕೊಂದು ಪರಿಹಾರ ಹುಡುಕುವಾ. ಈಗ ಬೇಡ, ಸಂಜೆ ಮಾತಾಡುವಾ" ಎಂದು ರಾಮಕೃಷ್ಣ ಅವನನ್ನು ಮನೆಗೊಯ್ಯಲೆಂದು ತಾನು ಕೊಯ್ದ ಉದ್ದ ದಂಡೆಯೊಂದನ್ನೂ ಅವನಿಗೇ ಕೊಟ್ಟುಕಳುಹಿಸಿದ.
            ಆ ಕ್ಷಣದಿಂದ ರಾಮಕೃಷ್ಣನಿಗೆ ಒಂದೇ ಆಲೋಚನೆಯಾಯಿತು. ಅಣ್ಣನಂತೂ ಇದಕ್ಕೆ ಒಪ್ಪುವವನಲ್ಲ, ವಿಷಯ ಗೊತ್ತಾದರೆ ದುರಂತವಾಗುತ್ತದೆ. ಜಾತಿ ಸಮಸ್ಯೆ ಇದ್ದದ್ದೇ, ಅದನ್ನು ನಿವಾರಿಸುವುದೂ ಆಗದ ಮಾತು. ಹಾಗೆಂದು ಹುಟ್ಟಿರುವ ಪ್ರೀತಿಯನ್ನು ಸಾಯಿಸಬಾರದು. ಕೂತಲ್ಲಿ ನಿಂತಲ್ಲಿ, ಉಣ್ಣುವಾಗ ಮಧ್ಯಾಹ್ನ ಮಲಗುವಾಗ, ಒಟ್ಟಿನಲ್ಲಿ ಅವನು ಹಣೆಯ ಮೇಲಿನ ಚಿಂತೆಯ ಗೆರೆಯೆರಡನ್ನು ಮಾಯಗೊಡಲೇ ಇಲ್ಲ. ಸಂಜೆಯಾಯಿತು. ನಾರಾಯಣ ಭುವನೆಯನ್ನು ಸೈಕಲ್ಲಿನಮೇಲೆ ಇವತ್ತು ಅವಳ ಮನೆಮೇಲಿನವರೆಗೂ ಬಿಟ್ಟುಬಂದಿದ್ದ. ಅದೇಕೋ ಪ್ರೀತಿ ಹೆಚ್ಚಾದಂತೆ ಭುವನೆಗೆ ಅನ್ನಿಸಿದ್ದರೂ ಒಳ್ಳೆಯದೇ ಆಯಿತೆಂದು ನಕ್ಕಿದ್ದಳು, ಅವಳು ಏಕೆ ನಕ್ಕಳೆಂದು ತಿಳಿದಂತೆ ಅವನು ನಕ್ಕಿದ್ದ.
            ರಾತ್ರಿ ಊಟವಾದಮೇಲೆ ತೋಟಕಾಯುವ ನೆಪದಿಂದ ಮನೆ ಹೊರಬಿದ್ದ ಚಿಕ್ಕಪ್ಪ ಮಗ ಇಬ್ಬರೂ ಮೋಳ ತಲುಪಿದ್ದರು. ಹೊರಟಾಗಿನಿಂದಲೂ ಇಬ್ಬರ ನಡುವೆ ಮಾತೇ ಇರಲಿಲ್ಲ. ರಾಮಕೃಷ್ಣ ಇನ್ನೂ ಆಲೋಚನೆಯಲ್ಲೇ ಎಂಬಂತೆ ಇದ್ದ. ಅಪ್ಪಚ್ಚಿಯ ಬಾಯಿಂದ ಒಂದಾದರೂ ಮಾತು ಹೊರಬೀಳಬಹುದೆಂದು ಕಾದು ಕಾದು ಸುಸ್ತಾದ ನಾರಾಯಣ ಕಡೆಗೂ ನಿದ್ರೆಗೆ ಶರಣಾಗಿದ್ದ. ಗಂಟೆ ಎಷ್ಟಾಗಿತ್ತೋ ಏನೋ, ತಲೆಯ ಹಿಂದೆ ಕೈಯಿಟ್ಟು ಅಡ್ಡಾಗಿದ್ದ ರಾಮಕೃಷ್ಣ ಫಕ್ಕನೆ ಎದ್ದುಕೂತು ನಾರಾಯಣನನ್ನು ತಟ್ಟತೊಡಗಿದ, "ಎದ್ದು ಸಾಯೋ, ನಿನಗೆ ಒಳ್ಳೇದಾಗಲಿ ಹೇಳಿ ನಾನು ತಲೆಬಿಸಿ ಮಾಡಿಕೊಂಡು ಕೂತಿದ್ದರೆ ವರಗುತ್ತಿರುವ ಚಂದ ನೋಡು!". ನಾರಾಯಣ ಎದ್ದುಕೂತು ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ವಿಷಯವೇನೆಂಬಂತೆ ನೋಡಿದ. "ನೀ ಎಂತ ಮಾಡುವುದು ಬೇಡ, ಸುಮ್ಮನೆ ಪ್ರೀತಿಯನ್ನು ಮುಂದುವರಿಸು... ನಾನಿದ್ದೀನೆ". ನಾರಾಯಣ, "........" ರಾಮಕೃಷ್ಣ, " ಹೆದರಬೇಡ, ಇನ್ನೊಂದೆರಡು ವರ್ಷವಾದಮೇಲೆ ಮನೆಬಿಟ್ಟು ಓಡಿಹೋಗಿಬಿಡಿ. ದುಡ್ಡು ಎಷ್ಟು ಬೇಕು ನನ್ನನ್ನು ಕೇಳು. ಈಗೀಗ ಆಟ ಕೈಗೆ ಹತ್ತುತ್ತಿದೆ. ಇಸ್ಪೀಟಿನಲ್ಲಿ ಬಂದ ದುಡ್ಡನ್ನೆಲ್ಲ ನಿನ್ನ ಲೆಕ್ಕಕ್ಕೆ ಬ್ಯಾಂಕಿನಲ್ಲಿಡುತ್ತೇನೆ, ಹೆದರಬೇಡ"

Wednesday, 28 March 2012

ಪೆನ್ಸಿಲ್ಲು ಪ್ರೇಮ

ಶಾಯಿಯ ಮೇಲಿನ ಪ್ರೇಮದ ಗುರುತೆಂಬಂತೆ ಬರೆದ ಕಥೆಯೊಂದನ್ನು post ಮಾಡಿದ್ದಾಯಿತು. ಈಗ ಸೀಸ, ಅಂದರೆ ಪೆನ್ಸಿಲ್ಲು ಪ್ರೇಮದ ಗುರುತಾಗಿ ಕೆಲವು ಚಿತ್ರಗಳು. ಇವುಗಳನ್ನು ಚಿತ್ರಗಳು ಅನ್ನುವುದಕ್ಕಿಂತ 'copy works' ಎಂದು ಕರೆಯುವುದು ಸರಿಯೆನಿಸುತ್ತದೆ.


normal ಬಣ್ಣದ ಹಾಳೆಯ ಮೇಲೆ 4b ಮತ್ತು 8b ಪೆನ್ಸಿಲ್ಲಿನಿಂದ ಹೆಣ್ಣಿನ portrait. ಕೃಪೆ: ಆದಿತ್ಯ ಚಾರಿ.



ಕಪ್ಪು ಬಣ್ಣದ Canson colorline paper ಮೇಲೆ Conte white chalk ನಿಂದ ಕಾಲುಗಳ ಚಿತ್ರ. ಕೃಪೆ: Momot 



ಕಪ್ಪು ಬಣ್ಣದ Canson colorline paper ಮೇಲೆ Conte white chalk ನಿಂದ ಹೆಣ್ಣೊಬ್ಬಳ portrait. ಕೃಪೆ: ಆದಿತ್ಯ ಚಾರಿ.


ಈ ರೀತಿ ಕಪ್ಪು ಬಣ್ಣದ ಹಾಳೆಯ ಮೇಲೆ ಬಿಳೀ ಬಣ್ಣದ ಪೆನ್ಸಿಲ್ಲಿನಿಂದ ಚಿತ್ರ ಬಿಡಿಸುವ ಶೈಲಿಗೆ Negative Drawing ಎನ್ನುತ್ತಾರೆ.