Monday, 2 April 2012

ಮತ್ತೊಂದು ಕಥೆ.


ಪ್ರೀತಿಯೆಂಬುದು....

            ನಡುರಾತ್ರಿಗಿನ್ನೊಂದು ಐದು ನಿಮಿಷ ಬಾಕಿಯಿರಬಹುದು. ರಾಮಕೃಷ್ಣ ಕುಮಟೆಯಿಂದ ಹೊನ್ನಾವರಕ್ಕೆ ಹೊರಟ ಯಾವುದೋ ಎಕ್ಸ್ ಪ್ರೆಸ್ ಬಸ್ಸು ಹತ್ತಿ ಡ್ರೈವರನ ಹತ್ತಿರ ಕೇಳಿಕೊಂಡು ರಾಮತೀರ್ಥದಲ್ಲೇ ಇಳಿದು ಭಸಭಸನೆ ನಡೆಯಲು ಶುರುಮಾಡಿ ಆಗಲೆ ಮುಕ್ಕಾಲು ಗಂಟೆಯ ಮೇಲಾಗಿತ್ತು. ಮನೆ ಇನ್ನೇನು ಒಂದು ಕಿಲೋಮೀಟರ್ ಬಾಕಿ ಇರಬಹುದಷ್ಟೆ. ಇವತ್ತು ಗೆದ್ದದ್ದೆಷ್ಟು, ಬೇರೆಬೇರೆ ಖರ್ಚಾದಮೇಲೆ ಉಳಿದದ್ದೆಷ್ಟು ಎಂದು ನೋಟುಗಳನ್ನು ಕಿಸೆಯಿಂದ ತೆಗೆದು ಕತ್ತಲೆಯಲ್ಲೇ ಐದನೇ ಬಾರಿ ಲೆಕ್ಕಾಚಾರ ಮಾಡಿದ. ಹೀಗೆ ವಾರಕ್ಕೆರಡುಮೂರು ದಿನ ಕುಮಟೆಯ ಕ್ಲಬ್ಬಿಗೆ ಇಸ್ಪೀಟಾಡಲು ಹೋಗುತ್ತಿದ್ದ ರಾಮಕೃಷ್ಣ ಇವತ್ತಂತೂ ಭಾರೀ ಲಾಭದ ಮೇಲೇ ಇದ್ದ. ಹೆಚ್ಚುಕಮ್ಮಿ ಒಂದೂವರೆ ಸಾವಿರ ರೂಪಾಯಿ. ಹೊಗುವಾಗ ಕೈಲಿದ್ದದ್ದು ಇನ್ನೂರು. ಅಷ್ಟಷ್ಟು ದಿವಸಕ್ಕೊಮ್ಮೆ ಲುಕ್ಸಾನು ಅನುಭವಿಸಿದರೂ ಇತ್ತೀಚೆಗೆ ಹೆಚ್ಚಾಗಿ ಆಟ ಕೈಗೆ ಹತ್ತುತ್ತಿದ್ದರಿಂದಾಗಿಯೇ ನಮ್ಮ ರಾಮಕೃಷ್ಣ ರಾಮಕೃಷ್ಣ ಹೋಗಲಾಗಿ ಕ್ಲಬ್ಬಿನಲ್ಲೆಲ್ಲ ಆರ್ ಕೆ ಹೆಗಡೆಯವರಾಗಿ ಪ್ರಸಿದ್ಧನಾಗತೊಡಗಿದ್ದು ಮತ್ತು ತಿಂಗಳಿಗೊಂದಾವರ್ತಿ ವಾರಕ್ಕೆರಡು ಸರ್ತಿಯಾಗಿದ್ದು.
            ರಾಮಕೃಷ್ಣನದು ಹೇಳಿಕೊಳ್ಳುವಷ್ಟೇನೂ ಆಸ್ತಿ ಹೊಂದಿರದ ಮಧ್ಯಮ ವರ್ಗದ ಒಂದು ಅವಿಭಾಜ್ಯ ಕುಟುಂಬ. ಅಪ್ಪ ಕಾಲವಾದಮೇಲೆ ತಾನೇ ಪಾಲಿನ ತಕರಾರೆತ್ತಿದರೂ ಅಣ್ಣ ಸುರೇಶನ ಕುತಂತ್ರದಿಂದಾಗಿ ಪಂಚಾಯಿತಿಗೆಯು ಪಾಲುಮಾಡುವ ನಿರ್ಣಯದಲ್ಲದೆ ಕೇವಲ ಸಣ್ಣಮಟ್ಟದ ಚಾಪಾರ್ಟಿಯಾಗಿ ಕೊನೆಗೊಂಡಿದ್ದನ್ನು ಕಂಡು ಬೇಸತ್ತಿದ್ದ. ಎಲ್ಲರೂ ಆದಂತೆ ಮದುವೆಯೊಂದನ್ನಾಗಿ ಎರಡು ಮಕ್ಕಳನ್ನೂ ಮಾಡಿದ್ದ. ಹೆಂಡತಿ ಜಲಜೆ, ಹಿರಿಮಗಳು ಅಖಿಲಾ, ಕಿರಿಯವಳು ನಿಖಿಲಾ. ನಿಜಹೇಳಬೇಕೆಂದರೆ ಪಾಲಿನ ಮಾತೆತ್ತಲು ಕುಮ್ಮಕ್ಕು ಕೊಟ್ಟವಳು ಜಲಜೆಯೇ ಎಂದು ಕೇರಿಯ ಕೆಲವರ ಅನುಮಾನ. ಒಟ್ಟಾರೆ ವಿಷಯವಿಷ್ಟೆ, ಆತನಿಗೆ ತನ್ನದೇ ಆದ ಬೇರೆ ಆದಾಯ ಅಂತ ಒಂದಿರಲಿಲ್ಲ. ಆದ್ದರಿಂದಲೇ ಮೊದಲಿನಿಂದಲೂ ಹೊಸಾಕುಳಿ ತೇರಿನಲ್ಲಿ ಜುಗಾರಿ ಆಡಿ ಇದ್ದ ಅನುಭವವನ್ನು ನಂಬಿಕೊಂಡು ಆತ ರಾತ್ರಿಗಳಲ್ಲಿ ಕುಮಟೆ ಬಸ್ಸು ಹತ್ತಲಾರಂಭಿಸಿದ.
            ರಾಮಕೃಷ್ಣ ಅವನಿಗನ್ನಿಸಿದಂತೆ ಕತ್ತಲಿಗೆ ಅಷ್ಟೇನು ಹೆದರುವವನಲ್ಲ, ಆದರೂ ಮೂರುಸಂಜೆಯ ವೇಳೆ ಮನೆಯಿಂದ ಒಂದು ಸೂಡಿ ಕಟ್ಟಿಕೊಂಡೇ ಹೊರಡುವುದು ಅಭ್ಯಾಸವಾಗಿಬಿಟ್ಟಿತ್ತು. ಸಂತೆಗುಳಿಯಲ್ಲಿ ಬಸ್ಸು ಹತ್ತುವ ಜಾಗದ ಬಳಿಯ ಹಿಂಡಿನ ಬದಿಯಲ್ಲಿ ಬಿಸಾಕಿಟ್ಟ ಅದನ್ನು ವಾಪಸ್ಸು ಬರುವಾಗ ಹೊತ್ತಿಸಿಕೊಂಡು ಬರುತ್ತಿದ್ದ. ಇಂದೂ ಕೂಡ ಹಾಗೆಯೇ ತಂದ ಸೂಡಿಯು ಸಮಾ ಮನೆಯೆದುರು ತಲುಪುವಷ್ಟರಲ್ಲಿ ಆರಿಹೋಗಿತ್ತು. "ಖರ್ಮ ತೀರಿತು ಇದರದ್ದು!" ಎನ್ನುತ್ತ ದಣಪೆ ದಾಟುತ್ತಿದ್ದಂತೆ ಪಕ್ಕದಲ್ಲಿದ್ದ ತೋಟದಲ್ಲಿ ಎಂತದೋ ಓಡಾಡಿದಂತೆ ಸರಭರ ಎಂದು ಸದ್ದಾಯಿತು. "ಸುಟ್ಟ ಹಂದಿಯದ್ದೇ ಕೆಲಸ", ಅಂಗಳ ತಲುಪಿ ಕಾಲಿಗೆ ನೀರುಬಿಟ್ಟುಕೊಳ್ಳುತ್ತ ಈ ಹಂದಿ ಸಮಸ್ಯೆಗೊಂದು ಪರಿಹಾರ ಆಲೋಚಿಸತೊಡಗಿದ. ವಿಪರೀತವಾಗಿತ್ತು ಇತ್ತೀಚೆಗಂತೂ, ಅಡಿಕೆಮರಕ್ಕೆ ಹಬ್ಬಿದ ಎಲೆಬಳ್ಳಿಗಳ ಬೇರುಗಳನ್ನು ಚೂರು ಬಿಡದೆ ಕಿತ್ತುಬಿಸಾಕುತ್ತಿದ್ದವು ಹಂದಿಗಳು. ಹೀಗಾದರೆ ಮಾರುವುದಕ್ಕೆ ಹೋಗಲಿ ಮನೆಯಲ್ಲಿ ಕವಳ ಹಾಕಲಿಕ್ಕೂ ಎಲೆ ಸಿಗುವುದು ಕಷ್ಟವಿತ್ತು.
            ಮಾರನೇ ದಿನ ಬೆಳಿಗ್ಗೆ ರಾಮಕೃಷ್ಣ ತೋಟಕ್ಕೆ ಹೋದವ ಹಾಗೆ ಪಕ್ಕದ ಗೌಡರಕೇರಿಯ ಗಳಿಯಣ್ಣನ ಮನೆಯ ಕಡೆ ನಡೆದ. "ವಡಿದೀರು ಆರಾಮಾ?", ಕೇಳುತ್ತ ಗಳಿಯಣ್ಣ ಬಾಳೆಚೂರಿನಲ್ಲಿ ಅವನ ಹೆಂಡತಿ ತಂದಿಟ್ಟ ಬಾಳೆಹಣ್ಣು ಸಕ್ಕರೆಯನ್ನು ಮುಂದುಮಾಡಿದ. ಅವನಿಗೆ ಗೊತ್ತಿತ್ತು, ಹೆಗಡೇರು ಯಾವುದೇ ಮುಖ್ಯವಾದ ಕೆಲಸವಿಲ್ಲದೆ ತನ್ನ ಮನೆಗೆಲ್ಲ ಬರುವವರಲ್ಲ ಎಂದು. ವಿಷಯವೇನೆಂದು ಕೇಳುವ ಮೊದಲೇ ಮಾತಿಗಿಟ್ಟುಕೊಂಡ ರಾಮಕೃಷ್ಣ, "ಹಂದಿಕಾಟ ಸಿಕ್ಕಾಪಟ್ಟೆ ಆಗಿದೆ ಮಾರಾಯ ಈಗಿತ್ಲಾಗೆ, ಕೋವಿ ವ್ಯವಸ್ಥೆ ಮಾಡಿದರೆ ಬಂದು ಹೊಡೆದುಕೊಡುತ್ತೀಯಾ ಹೇಗೆ?", ಕೇಳಿದ ಬಾಳೆಹಣ್ಣನ್ನು ಸುಲಿಯುತ್ತ. ಗಳಿಯಣ್ಣ "ನೀವು ಕೇಳುವುದು ಹೆಚ್ಚಾ ನಾನು ಬರುವುದಾ? ಇವತ್ತು ರಾತ್ರಿಯೇ ಕೆಲಸ ಮುಗಿಸಿಬಿಡುವ" ಎಂದು ತನ್ನ ಸಮ್ಮತಿ ಸೂಚಿಸಿದ. ಅಲ್ಲಿಗೆ ಹಂದಿಬೇಟೆ ಕಾರ್ಯಕ್ರಮದ ಮೊದಲ ಹಂತ ಮುಗಿದಂತೆ. ಕಮತೀರ ಮನೆಯಲ್ಲಿ ಕೋವಿಯಿದೆ. ಕೋವಿಯೆಂದರೆ ತೋಟಾಕೋವಿಯಲ್ಲ, ಶೆಲ್ಲಿನದು. ಸೈನಿಕರು ಬಳಸುತ್ತಾರಲ್ಲ, ಅಂಥದ್ದು. ಒಂದೇ ಹೊಡೆತ, ಯಾವ ಹಂದಿಯಾದರೂ ಸತ್ತುರುಳಬೇಕು, ಹಾಗಿತ್ತು ಅದರ ಪ್ರಭಾವ. ಹೊಡೆದ ಹಂದಿಯ ಮಾಂಸದಲ್ಲಿ ತನಗೊಂದು ಸಣ್ಣ ಪಾಲು ಹಾಗು ಕೋವಿ ಗುಂಡಿನ ಖರ್ಚು ತನ್ನ ಕೈಮುಟ್ಟುವುದು ಖಾತ್ರಿಯಾದಮೇಲೆ ಮಾತ್ರ ಮಾಲಿಕನಾದ ರಾಮಚಂದ್ರ ಕಮತಿ ಕೋವಿಯನ್ನು ಬಳಸಲು ಬಿಡುವುದು. ಮಧ್ಯಾಹ್ನದ ಊಟ ಮುಗಿಸಿ ಅವನ ಮನೆಗೆ ಹೋಗಿದ್ದ ರಾಮಕೃಷ್ಣ ಸುಮಾರುಹೊತ್ತಿನ ಮಾತುಕತೆಯ ಮೇಲೆ ಕೋವಿಯನ್ನು ಹೊತ್ತುಕೊಂಡೇ ವಾಪಸು ಬಂದಿದ್ದ.
             ಸೂರ್ಯ ಕಂತಿದ. ಕರೆಂಟಿರುವವರ ಮನೆಯಲ್ಲಿ ಟ್ಯೂಬುಲೈಟುಗಳು ಮತ್ತು ಬಲ್ಬುಗಳೂ, ಇಲ್ಲದವರ ಮನೆಯಲ್ಲಿ ಸೀಮೆಎಣ್ಣೆ ಬುರುಡೆಗಳೂ ಬೆಳಗಿದವು. ಹೇಳಿದ ಸಮಯಕ್ಕೆ ಸರಿಯಾಗಿ ಗಳಿಯಣ್ಣ ರಾಮಕೃಷ್ಣನ ಮನೆಗೆ ಬಂದ. ಅವನ ಊಟ ಅವರ ಮನೆಯಲ್ಲೇ ಆಯಿತು. ವಿಷಯ ಅಷ್ಟುಹೊತ್ತಿಗೆ ಸುರೇಶನಿಗೂ ತಿಳಿದಿತ್ತು. ಸಮ್ಮತಿಯಿಂದೆಂಬಂತೆ ಊಟವಾದಮೇಲೆ ತಾನೇ ಗಳಿಯಣ್ಣನಿಗೆ ಕವಳ ಕೊಡುತ್ತ "ಹೊಡೆದ ಹಂದಿಯನ್ನು ಅಲ್ಲೇ ಮನೆಗೆ ತೆಗೆದುಕೊಂಡು ಹೋಗಿಬಿಡು, ರಗಳೆ ಮುಗಿದುಹೋಗಲಿ" ಎಂದ. "ಹಾಂಗೆ ಆಗಲಿ ವಡೆಯಾ", ಕೋವಿಯನ್ನು ಹೆಗಲಿಗೇರಿಸಿ, ಅಂಡಿನ ಬಳ್ಳಿಗೆ ಕತ್ತಿಯನ್ನು ಸಿಗಿಸಿಕೊಂಡು ಮತ್ತೆರಡು ಕವಳಕ್ಕಾಗುವಷ್ಟು ಎಲೆ ಅಡಿಕೆ ತೆಗೆದುಕೊಂಡು ಅಂಗಳ ದಾಟಿ ಕತ್ತಲೆಯಲ್ಲಿ ಕರಗಿ ನಡೆದ.
            ರಾತ್ರಿ ಏನು ನಡೆಯಿತೋ ದೇವರಿಗೇ ಗೊತ್ತು, ಬೆಳಗಾಗುವಷ್ಟರಲ್ಲಿ ಗಳಿಯಣ್ಣನ ಹೆಣ ಹಳ್ಳದ ಬದಿಯಲ್ಲಿ ಅನಾಥವಾಗಿ ಬಿದ್ದಿತ್ತು. ಕೋವಿಯಿಂದ ಹಾರಿದ ಗುಂಡಿನ ಕುರುಹಾಗಿ ಶೆಲ್ಲಿನ ಮೇಲಿನ ಸಿಪ್ಪೆ ಹೆಣದ ಪಕ್ಕದಲ್ಲಿ ಬಿದ್ದಿತ್ತು. ಆದರೆ ಹಂದಿಯ ಸುಳಿವಿಲ್ಲ, ತೋಟದಲ್ಲೆಲ್ಲೂ ಹಂದಿಯ ಹೆಜ್ಜೆಗುರುತೂ ಇಲ್ಲ. ಹಾಗಾದರೆ ಗಳಿಯಣ್ಣ ತನಗೆ ತಾನೇ ಗುಂಡಿಟ್ಟುಕೊಂಡನೇ? ಇಲ್ಲ, ಅವನ ಮೈಮೇಲೆ ಯಾವುದೇ ಗಾಯವಾದಹಾಗಿಲ್ಲ. ಆಗಿದ್ದು ಆಗಿಯಾಯಿತು, ಸತ್ತವನು ಹಿಂದಿರುಗಿ ಬರಲಾರ. ಅವನ ಹೆಂಡತಿ ಹುಚ್ಚು ಹಿಡಿದವಳಂತೆ ರೋದಿಸಿದ್ದಳು, ಮಗಳು ಭುವನೆಯನ್ನುದ್ದೇಶಿಸಿ "ಹೋದನಲ್ಲೇ, ನಿನ್ನಪ್ಪ ಹೇಳುವವನೊಬ್ಬ ಹೋದನಲ್ಲೇ" ಎಂದು ಪದೇಪದೇ ಕಿರುಚುತ್ತ. ಅಪ್ಪ ಹೋಗಿದ್ದಕ್ಕೆ ಆಕೆಗೆ ಅಷ್ಟೇನೂ ದುಃಖವಾಗಿರಲಿಲ್ಲ, ಆದರೂ ಅಳದೇಹೋದರೆ ಅವ್ವಿಗೆ ದುಃಖವಾಗಬಹುದೆಂದು ಹೆದರಿ ನಾಲ್ಕು ಹನಿ ಕಣ್ಣೀರನ್ನು ತಾನೂ ಚೆಲ್ಲಿದ್ದಳು. ಒಟ್ಟಾರೆ ಸಾವಿನ ಹೊಣೆಗಾರ ಪಾಪದ ರಾಮಕೃಷ್ಣನಾದ. ಸಹಜವಾಗಿ ಕನಿಕರವೂ ಉಕ್ಕಿತ್ತು ಅವನಿಗೆ. ಸುರೇಶನೂ ಒಪ್ಪಿಕೊಂಡಮೇಲೆ ಧನಸಹಾಯ ಅಂತ ಎಷ್ಟೋ ಒಂದಿಷ್ಟು ದುಡ್ಡೂ ಕೊಟ್ಟಾಯಿತು. ಗಳಿಯಣ್ಣ ಸತ್ತ ಮೇಲೆ ಸಂಸಾರದ ಸ್ಥಿತಿಗತಿ ಹೇಗಿದೆ ಎಂದು ನೋಡಿಕೊಂಡು ಬರಲು ಹಾಗು ಸ್ವಲ್ಪ ಸಾಂತ್ವನದ ಮಾತಾಡಿಬರಲು ಸುರೇಶನ ಮಗ ಲಕ್ಷ್ಮೀನಾರಾಯಣ ಅಷ್ಟಷ್ಟು ದಿನಕ್ಕೊಮ್ಮೆ ಹೋಗಿಬರುವುದೆಂದು ಮನೆಯಲ್ಲಿ ಆಗ್ರಹವಾಗಿದ್ದು ಈ ಕೆಲಸ ಆತನಿಗೆ ಮೊದಮೊದಲು ಬೇಜಾರು ತರಿಸಿದ್ದರೂ ಈಗೀಗ ಅವರ ಮನೆಗೆ ಹೋಗದಿದ್ದರೆ ಬೇಜಾರು ಬರುವಂತಾಗಿತ್ತು. ಇದಕ್ಕೆಲ್ಲ ಕಾರಣ ಅವನ ಮತ್ತು ಭುವನೆಯ ನಡುವೆ ಹುಟ್ಟಿಕೊಂಡ ಪ್ರೇಮವೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರೇಮ ಕರುಣೆಯಿಂದ ಹುಟ್ಟಿತೇ ಅಥವ ಬೇರೆ ಯಾವುದರಿಂದಲಾದರೂ ಇರಬಹುದೇ ಎಂದು ಲಕ್ಷ್ಮೀನಾರಾಯಣ ತಲೆಕೆಡಿಸಿಕೊಂಡವನಲ್ಲ. ಹೊನ್ನಾವರದ ಟಾಕೀಸಿನಲ್ಲಿ ನೋಡಿದ ಪಿಕ್ಚರುಗಳಲ್ಲಿನಂತೆಯೇ ಆಕೆಯನ್ನು ಪವಿತ್ರವಾಗಿ ಪ್ರೇಮಿಸಿದ್ದನಷ್ಟೆ.
            ಈ ನಮ್ಮ ಲಕ್ಷ್ಮೀನಾರಾಯಣನೂ ಮತ್ತು ಭುವನೆಯೂ ಎರಡನೆ ವರ್ಷದ ಪೀಯೂಸಿ. ಅರೆಅಂಗಡಿ ಜ್ಯೂನಿಯರ್ ಕಾಲೇಜಿನಲ್ಲಿ ಒಟ್ಟಿಗೇ ಓದುತ್ತಿದ್ದರು. ಗಳಿಯಣ್ಣ ಅವನ ಜಾತಿಯ ಉಳಿದವರಿಗೆ ಹೋಲಿಸಿದರೆ ಬೆಳವಣಿಗೆಯ ಹಾದಿಯಲ್ಲಿ ಸ್ವಲ್ಪ ಮುಂದಿದ್ದ. ಕಲಿತು ತನ್ನ ಮಗಳು ಏನು ಮಾಡಬೇಕೆಂಬ ಅರಿವು ಆತನಿಗೆ ಬಾರದೆ ಇದ್ದರೂ ಒಡೆಯರ ಮನೆ ಮಕ್ಕಳು ಕಾಲೇಜಿಗೆ ಹೋಗುವುದನ್ನು ನೋಡಿ ಪ್ರೇರಿತಗೊಂಡಿದ್ದ. ಆದರೆ ತನ್ನ ಕನಸು ಸಾಕಾರಗೊಳ್ಳುವುದೋ ಇಲ್ಲವೋ ನೋಡಲು ನಿಲ್ಲಲಿಲ್ಲ ಅಷ್ಟೆ. ಭುವನೆ ಸುರೂಪಿಯಲ್ಲದಿದ್ದರೂ ಕುರೂಪಿಯಂತೂ ಅಲ್ಲವಾಗಿದ್ದಳು. ಅಷ್ಟಕ್ಕೂ ಪ್ರೀತಿ ಯಾರಿಗಾದರೂ ಯಾರಮೇಲಾದರೂ ಯಾವಾಗಲಾದರೂ ಮೂಡಬಹುದು. ಅವನು ಬೆಳಿಗ್ಗೆ ಕಾಲೇಜಿಗೆ ಬರಬೇಕಾದರೆ ಬೇಣದಲ್ಲಿ ಕಾಸಿನಮರ ಹತ್ತಿ ಸೀತಾದಂಡೆಯನ್ನು ಕೊಯ್ದು ಅವಳಿಗೆ ತರುತ್ತಿದ್ದ. ಎರಡು ಪೀರಿಯಡ್ಡುಗಳು ಮುಗಿದಮೇಲೆ ಬಿಡುವ ವಿರಾಮದ ಸಮಯದಲ್ಲಿ ಅದು ಭುವನೆಯ ಮುಡಿಯಲ್ಲಿ ಕುಳಿತು ಅವಳ ಕಣ್ಣಿನೊಂದಿಗೆ ನಗುತ್ತಿತ್ತು. ಒಂದೊಂದು ದಿನ ಲಕ್ಷ್ಮೀನಾರಾಯಣ ಆಕೆಯನ್ನು ಸೈಕಲ್ ಮೇಲೆ ಡಬಲ್ ಮಾಡಿ ಸಂತೆಗುಳಿಯ ತನಕ ಕರೆದೊಯ್ಯುವುದೂ ಉಂಟು.
            ಹೀಗೆ ಪ್ರೀತಿಸಿ ಮುಂದೇನು ಮಾಡುತ್ತೇನೆಂಬ ಭವಿಷ್ಯದ ಆಲೋಚನೆ ಲಕ್ಷ್ಮೀನಾರಾಯಣನನ್ನು ಯಾವತ್ತೂ ಬಾಧಿಸಿದ್ದಿಲ್ಲ, ಸುಮ್ಮನೆ ಆತ ಆಕೆಯನ್ನೂ ಆಕೆ ಆತನನ್ನೂ ಉದ್ದಕ್ಕೆ ಪ್ರೀತಿಸಿಕೊಂಡು ಬಂದಿದ್ದರು. ಎಲ್ಲವೂ ಸಾಂಗವಾಗಿ ನಡೆದಿರಲು ಒಂದು ದಿನ ಲಕ್ಷ್ಮೀನಾರಾಯಣ ಸೀತಾದಂಡೆ ಕೊಯ್ಯುತ್ತಿರಬೇಕಾದರೆ ಅಲ್ಲೇ ಪಕ್ಕದಲ್ಲಿ ಸೊಪ್ಪು ಕೊಯ್ಯುತ್ತಿದ್ದ ಚಿಕ್ಕಪ್ಪ ರಾಮಕೃಷ್ಣ ಅದನ್ನು ನೋಡಿಬಿಟ್ಟ. ಸಣ್ಣವನಿರುವಾಗಿಂದಲೂ ನಾರಾಯಣನಿಗೆ ಅಪ್ಪಚ್ಚಿಯ ಜೊತೆ ಸಲಿಗೆ ಹೆಚ್ಚು. ಆದರೂ ಪ್ರೀತಿಯ ವಿಷಯವನ್ನದೇಕೋ ಮುಚ್ಚಿಟ್ಟಿದ್ದ. ಏನೂ ಕೇಳದಿದ್ದರೆ ಸಾಕಪ್ಪ ದೇವರೇ ಎಂದುಕೊಳ್ಳುತ್ತಿರುವಷ್ಟರಲ್ಲೇ "ಹುಡುಗಿ ಯಾರೋ ಕುಮಾರಕಂಠೀರವ?", ಕೇಳಿಯೇಬಿಟ್ಟ ಅಪ್ಪಚ್ಚಿ. ಇನ್ನು ಬೇರೆ ದಾರಿಯಿಲ್ಲವೆಂದುಕೊಂಡ ಉದಯೋನ್ಮುಖ ಪ್ರೇಮಿ ವೃತ್ತಾಂತವನ್ನು ಸವಿವರವಾಗಿ ಬಿಚ್ಚಿಟ್ಟ. "ಥತ್! ಎಂಥ ಕೆಲಸ ಮಾಡಿಕೊಂಡೆಯೋ... ತಡೆ ಸ್ವಲ್ಪ ಆಲೋಚನೆ ಮಾಡಿ ಇದಕ್ಕೊಂದು ಪರಿಹಾರ ಹುಡುಕುವಾ. ಈಗ ಬೇಡ, ಸಂಜೆ ಮಾತಾಡುವಾ" ಎಂದು ರಾಮಕೃಷ್ಣ ಅವನನ್ನು ಮನೆಗೊಯ್ಯಲೆಂದು ತಾನು ಕೊಯ್ದ ಉದ್ದ ದಂಡೆಯೊಂದನ್ನೂ ಅವನಿಗೇ ಕೊಟ್ಟುಕಳುಹಿಸಿದ.
            ಆ ಕ್ಷಣದಿಂದ ರಾಮಕೃಷ್ಣನಿಗೆ ಒಂದೇ ಆಲೋಚನೆಯಾಯಿತು. ಅಣ್ಣನಂತೂ ಇದಕ್ಕೆ ಒಪ್ಪುವವನಲ್ಲ, ವಿಷಯ ಗೊತ್ತಾದರೆ ದುರಂತವಾಗುತ್ತದೆ. ಜಾತಿ ಸಮಸ್ಯೆ ಇದ್ದದ್ದೇ, ಅದನ್ನು ನಿವಾರಿಸುವುದೂ ಆಗದ ಮಾತು. ಹಾಗೆಂದು ಹುಟ್ಟಿರುವ ಪ್ರೀತಿಯನ್ನು ಸಾಯಿಸಬಾರದು. ಕೂತಲ್ಲಿ ನಿಂತಲ್ಲಿ, ಉಣ್ಣುವಾಗ ಮಧ್ಯಾಹ್ನ ಮಲಗುವಾಗ, ಒಟ್ಟಿನಲ್ಲಿ ಅವನು ಹಣೆಯ ಮೇಲಿನ ಚಿಂತೆಯ ಗೆರೆಯೆರಡನ್ನು ಮಾಯಗೊಡಲೇ ಇಲ್ಲ. ಸಂಜೆಯಾಯಿತು. ನಾರಾಯಣ ಭುವನೆಯನ್ನು ಸೈಕಲ್ಲಿನಮೇಲೆ ಇವತ್ತು ಅವಳ ಮನೆಮೇಲಿನವರೆಗೂ ಬಿಟ್ಟುಬಂದಿದ್ದ. ಅದೇಕೋ ಪ್ರೀತಿ ಹೆಚ್ಚಾದಂತೆ ಭುವನೆಗೆ ಅನ್ನಿಸಿದ್ದರೂ ಒಳ್ಳೆಯದೇ ಆಯಿತೆಂದು ನಕ್ಕಿದ್ದಳು, ಅವಳು ಏಕೆ ನಕ್ಕಳೆಂದು ತಿಳಿದಂತೆ ಅವನು ನಕ್ಕಿದ್ದ.
            ರಾತ್ರಿ ಊಟವಾದಮೇಲೆ ತೋಟಕಾಯುವ ನೆಪದಿಂದ ಮನೆ ಹೊರಬಿದ್ದ ಚಿಕ್ಕಪ್ಪ ಮಗ ಇಬ್ಬರೂ ಮೋಳ ತಲುಪಿದ್ದರು. ಹೊರಟಾಗಿನಿಂದಲೂ ಇಬ್ಬರ ನಡುವೆ ಮಾತೇ ಇರಲಿಲ್ಲ. ರಾಮಕೃಷ್ಣ ಇನ್ನೂ ಆಲೋಚನೆಯಲ್ಲೇ ಎಂಬಂತೆ ಇದ್ದ. ಅಪ್ಪಚ್ಚಿಯ ಬಾಯಿಂದ ಒಂದಾದರೂ ಮಾತು ಹೊರಬೀಳಬಹುದೆಂದು ಕಾದು ಕಾದು ಸುಸ್ತಾದ ನಾರಾಯಣ ಕಡೆಗೂ ನಿದ್ರೆಗೆ ಶರಣಾಗಿದ್ದ. ಗಂಟೆ ಎಷ್ಟಾಗಿತ್ತೋ ಏನೋ, ತಲೆಯ ಹಿಂದೆ ಕೈಯಿಟ್ಟು ಅಡ್ಡಾಗಿದ್ದ ರಾಮಕೃಷ್ಣ ಫಕ್ಕನೆ ಎದ್ದುಕೂತು ನಾರಾಯಣನನ್ನು ತಟ್ಟತೊಡಗಿದ, "ಎದ್ದು ಸಾಯೋ, ನಿನಗೆ ಒಳ್ಳೇದಾಗಲಿ ಹೇಳಿ ನಾನು ತಲೆಬಿಸಿ ಮಾಡಿಕೊಂಡು ಕೂತಿದ್ದರೆ ವರಗುತ್ತಿರುವ ಚಂದ ನೋಡು!". ನಾರಾಯಣ ಎದ್ದುಕೂತು ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ವಿಷಯವೇನೆಂಬಂತೆ ನೋಡಿದ. "ನೀ ಎಂತ ಮಾಡುವುದು ಬೇಡ, ಸುಮ್ಮನೆ ಪ್ರೀತಿಯನ್ನು ಮುಂದುವರಿಸು... ನಾನಿದ್ದೀನೆ". ನಾರಾಯಣ, "........" ರಾಮಕೃಷ್ಣ, " ಹೆದರಬೇಡ, ಇನ್ನೊಂದೆರಡು ವರ್ಷವಾದಮೇಲೆ ಮನೆಬಿಟ್ಟು ಓಡಿಹೋಗಿಬಿಡಿ. ದುಡ್ಡು ಎಷ್ಟು ಬೇಕು ನನ್ನನ್ನು ಕೇಳು. ಈಗೀಗ ಆಟ ಕೈಗೆ ಹತ್ತುತ್ತಿದೆ. ಇಸ್ಪೀಟಿನಲ್ಲಿ ಬಂದ ದುಡ್ಡನ್ನೆಲ್ಲ ನಿನ್ನ ಲೆಕ್ಕಕ್ಕೆ ಬ್ಯಾಂಕಿನಲ್ಲಿಡುತ್ತೇನೆ, ಹೆದರಬೇಡ"

Wednesday, 28 March 2012

ಪೆನ್ಸಿಲ್ಲು ಪ್ರೇಮ

ಶಾಯಿಯ ಮೇಲಿನ ಪ್ರೇಮದ ಗುರುತೆಂಬಂತೆ ಬರೆದ ಕಥೆಯೊಂದನ್ನು post ಮಾಡಿದ್ದಾಯಿತು. ಈಗ ಸೀಸ, ಅಂದರೆ ಪೆನ್ಸಿಲ್ಲು ಪ್ರೇಮದ ಗುರುತಾಗಿ ಕೆಲವು ಚಿತ್ರಗಳು. ಇವುಗಳನ್ನು ಚಿತ್ರಗಳು ಅನ್ನುವುದಕ್ಕಿಂತ 'copy works' ಎಂದು ಕರೆಯುವುದು ಸರಿಯೆನಿಸುತ್ತದೆ.


normal ಬಣ್ಣದ ಹಾಳೆಯ ಮೇಲೆ 4b ಮತ್ತು 8b ಪೆನ್ಸಿಲ್ಲಿನಿಂದ ಹೆಣ್ಣಿನ portrait. ಕೃಪೆ: ಆದಿತ್ಯ ಚಾರಿ.



ಕಪ್ಪು ಬಣ್ಣದ Canson colorline paper ಮೇಲೆ Conte white chalk ನಿಂದ ಕಾಲುಗಳ ಚಿತ್ರ. ಕೃಪೆ: Momot 



ಕಪ್ಪು ಬಣ್ಣದ Canson colorline paper ಮೇಲೆ Conte white chalk ನಿಂದ ಹೆಣ್ಣೊಬ್ಬಳ portrait. ಕೃಪೆ: ಆದಿತ್ಯ ಚಾರಿ.


ಈ ರೀತಿ ಕಪ್ಪು ಬಣ್ಣದ ಹಾಳೆಯ ಮೇಲೆ ಬಿಳೀ ಬಣ್ಣದ ಪೆನ್ಸಿಲ್ಲಿನಿಂದ ಚಿತ್ರ ಬಿಡಿಸುವ ಶೈಲಿಗೆ Negative Drawing ಎನ್ನುತ್ತಾರೆ. 

Monday, 26 March 2012


                             ದೈವವೊಂದು ಬಗೆಯಿತು

           "ಒಂದು ಕಟ್ಟಿಗೆ ಮೂರ್ರುಪಾಯಿ ಅಂದರೇನು ಕಮ್ಮಿಯಾಯಿತೇ? ಅಲ್ಲ, ಬಾಡಿಗೆಯ ಖರ್ಚು ಸೇರಿಸಿ ರೇಟು ಹೇಳಿದರೂ ಹೆಚ್ಚೇ ಆಯ್ತಿದು. ಈ ದನದ ಹೊಟ್ಟೆ ಹೊರೆಯುವುದು ಸಂಸಾರ ಸಾಗಿಸುವದಕ್ಕಿಂತ ಕಷ್ಟವಾಯಿತಲ್ಲ!" ಎಂದು ತಮ್ಮ ಅರೆಕಿವುಡು ಹೆಂಡತಿ ಪಾರ್ವತಿಗೆ ಹೇಳುತ್ತ ಕವಳ ಬಾಯಿಗಿಟ್ಟುಕೊಂಡ ರಾಮ ಹೆಗಡೇರಿಗೆ ಎಂದೋ ಎಲ್ಲೋ ಕೀರ್ಥನೆಯೊಂದರಲ್ಲಿ ಕೇಳಿದ ಕಲಿಗಾಲ ಸಜ್ಜನರಿಗಲ್ಲ ಎಂಬ ಮಾತು ನೆನಪಾಯಿತು. ಇದ್ದೊಬ್ಬ ಮಗ ಗೋಪಾಲನನ್ನು ವಿದ್ಯಾಭ್ಯಾಸ ಮಾಡಿಸಿ ಮಾಡಿಸಿ ಇನ್ನೇನು ಎಲ್ಲ ಮುಗಿಯಿತು, ಮಗ ತಮ್ಮನ್ನು ಪಾಲಿಸುವ ಕಾಲ ಬಂದಿತೆನ್ನುವ ಸಮಯದಲ್ಲೇ ಆತ ನೇಣು ಹಾಕಿಕೊಂಡು ಸಾಯದೆ ಇದ್ದಿದ್ದರೆ ಅರವತ್ತೈದು ವರ್ಷವಾದಮೇಲೆಲ್ಲ ಮನೆ ಯಜಮಾನಿಕೆಯನ್ನು ಹೆಗಲಮೇಲಿಟ್ಟುಕೊಂಡು ಹೆಣಗಾಡುವ ಪರಿಸ್ಥಿತಿ ಅವರಿಗೆ ಬರುತ್ತಿತ್ತೇ? ಏಡ್ಸ್ ರೋಗ ಹತ್ತಿಕೊಂಡಿತ್ತು, ವಿಷಯ ಮನೆಯಲ್ಲಿ, ಊರಲ್ಲಿ ಎಲ್ಲರಿಗು ತಿಳಿದರೆ ಏನು ಮಾಡುವುದೆಂದು ಉಪಾಯ ತೋಚದೆ ಹಾಗೆ ಮಾಡಿಕೊಂಡನೆಂದು ಆಗ ಒಂದಷ್ಟು ದಿನ ಸುದ್ದಿ ಹಬ್ಬಿದ್ದು ನಿಜ. ಹೆಗಡೇರು ಮಾತ್ರ ಹಾಗೆಲ್ಲ ಆಗಿರಲಿಕ್ಕೆ ಶಕ್ಯವೇ ಇಲ್ಲ, ಕಡಿಮೆ ಅಂಕಗಳಿಸಿದ್ದಕ್ಕೋ ಅಥವ ಪ್ರೇಮ ಭಗ್ನಗೊಂಡಿದ್ದಕ್ಕೋ ನಮ್ಮ ಗೋಪಾಲ ಹಾಗೆ ಮಾಡಿಕೊಂಡಿರಬೇಕು, ಎಲ್ಲ ದೈವೇಚ್ಛೆ ಎಂದು ತಮಗೆ ತಾವೆ ಸಮಾಧಾನ ಹೇಳಿಕೊಂಡು ಸುಮ್ಮನಾಗಿದ್ದರು. ಪಾರ್ವತಿ ಕಣ್ಣೀರು ಹಾಕಿಕೊಂಡಿದ್ದಳು. ಹೆಚ್ಚಿಲ್ಲ, ಒಂದೆರಡು ತಿಂಗಳಷ್ಟೆ.
            ಲಾರಿಯಿಂದ ಎರಡು ಸಾವಿರ ಕಟ್ಟು ಹುಲ್ಲನ್ನು ಎಣಿಸಿ ತೋಡುವಷ್ಟರಲ್ಲಾಗಲೇ ಸೂರ್ಯ ಮುಳುಗಿಬಿಟ್ಟಿದ್ದ. ಕತ್ತಲೆಯಲ್ಲಿ ಅವನ್ನು ಪಿಂಡಿಕಟ್ಟಿ ಹೊತ್ತುತರುವ ಸಾಹಸಕ್ಕೆ ಕೈಹಾಕದ ಹೆಗಡೇರು ಬೆಳಗ್ಗೆ ಯಾರಾದರೂ ಆಳಿಗೆ ಹೇಳಿ ಆ ಕೆಲಸವನ್ನು ಮಾಡಿಸಿದರಾಯಿತು ಎಂದುಕೊಂಡು ರಾತ್ರಿ ಎಂಟರ ವಾರ್ತೆ ನೋಡಿ ಮಧ್ಯಾಹ್ನದ ತಂಗಳನ್ನವನ್ನು ಉಂಡು ಮುಗಿಸಿ ಬಾಕಿ ಇದ್ದ ಅಡಿಕೆಯನ್ನು ಆರಿಸಿಟ್ಟು ಒಂಭತ್ತೂವರೆಗೆಲ್ಲ ಹಾಸಿಗೆ ಬಿಚ್ಚಿ ಮಲಗಿಬಿಟ್ಟರು. ಪಾತ್ರೆಗಳನ್ನೆಲ್ಲ ತೊಳೆದು ನಾಳೆಯ ದೋಸೆಗೆ ಹಿಟ್ಟು ನೆನೆಯಲು ಬಿಟ್ಟು ಇನ್ನೊಂದು ಹದಿನೈದು ನಿಮಿಷದಲ್ಲಿ ಪಾರ್ವತಿಯೂ ಅಡ್ಡಾದಳು.
            ಹೆಗಡೇರ ಮನೆಗೆ ಹುಲ್ಲು ಬಂದು ಬಿದ್ದಿದ್ದನ್ನು ಸಂಜೆ ಸೊಸೈಟಿಯಿಂದ ರೇಷನ್ ತೆಗೆದುಕೊಂಡು ಹೋಗುವಾಗಲೆ ನೋಡಿದ್ದ ಮಾರುತಿನಾಯ್ಕನ ತಲೆಯಲ್ಲಿ ಅದಾಗಲೇ ರಾತ್ರಿ ಇಲ್ಲಿಂದ ಒಂದು ನೂರು ಕಟ್ಟನ್ನು ಹಾರಿಸಿಬಿಟ್ಟರೆ ಈ ಮುದುಕನಿಗೆ ಗೊತ್ತಾಗಲಿಕ್ಕಿಲ್ಲ, ಮನೆಯಲ್ಲಿ ಸಾಕಿಕೊಂಡ ಒಂದು ದನಕ್ಕೆ ಇನ್ನೊಂದು ತಿಂಗಳಿಗೆ ಸಾಕಾದೀತು ಎಂಬ ಯೋಚನೆ ಬಂದುಬಿಟ್ಟಿತ್ತು. ಹೊಳೆಯಾಚೆಗಿನ ಹಿತ್ಲಕೇರಿಯಲ್ಲಿ ಅವನ ಮನೆ. ಸಹಾಯಕ್ಕಿರಲಿ ಎಂದು ಆಚೆಮನೆಯ ಫರ್ನಾಂಡೀಸನನ್ನೂ ಜೊತೆ ಕರೆದುಕೊಂಡು ಆತ ಅಶ್ವತ್ಥಕಟ್ಟೆಯ ಪಕ್ಕದಲ್ಲಿ ಬಿದ್ದಿದ್ದ ಹುಲ್ಲುರಾಶಿಯನ್ನು ತಲುಪಿದಾಗ ಸಮಯ ಸರಿಯಾಗಿ ಹನ್ನೊಂದೂವರೆ ಘಂಟೆ. "ನೂರು ಕಟ್ಟು ತೆಗೆದರೆ ಹೆಗಡ್ರಿಗೇನು ಗುತ್ತಾಗುದಿಲ್ಲ. ಕೂಲಿ ದುಡ್ಡು ಕಡಿಮೆ ಕೊಟ್ಟದ್ದಕ್ಕೆ ಸರೀ ಆಗ್ತದೆ" ಎಂದು ಪಿಸುದನಿಯಲ್ಲಿ ಹೇಳಿದ ಮಾರುತಿ ಫರ್ನಾಂಡೀಸನನ್ನು ರಸ್ತೆಯ ಮೇಲೆ ಕಾಯಲು ಬಿಟ್ಟು ಬಿಚ್ಚಿಟ್ಟ ಬಳ್ಳಿಯ ಮೇಲೆ ಹುಲ್ಲುಕಟ್ಟುಗಳನ್ನು ಒಂದೊಂದಾಗಿ ಪೇರಿಸಿ ಪಿಂಡಿ ತಯಾರುಮಾಡತೊಡಗಿದ. ಸಂಜೆ ಭಾಸ್ಕೇರಿಯಲ್ಲಿ ಬಿಟ್ಟುಕೊಂಡು ಬಂದಿದ್ದ ಎಣ್ಣೆಯ ನಶೆ ಫರ್ನಾಂಡೀಸನನ್ನು ಇನ್ನೂ ತೂರಾಡಿಸುತ್ತಲೇ ಇತ್ತು. ಅವನಿಗೆ ಇದ್ದಕ್ಕಿದ್ದಂತೆ ಒಂದು ಬೀಡಿಹಚ್ಚುವ ಬಯಕೆ ಯಾಕೋ ಉತ್ಕಟವಾಯಿತು. ತಡಮಾಡದೇ ಕಿಸೆಯಿಂದ ಬೀಡಿಯೊಂದನ್ನು ತೆಗೆದು ಬಾಯಿಗಿಟ್ಟು ಬೆಂಕಿಕಡ್ಡಿ ಗೀರಿಯೇಬಿಟ್ಟ. ಈಗ ಫರ್ನಾಂಡೀಸನಿಗೆ ಹಳೇ ಕನ್ನಡ ಪಿಕ್ಚರಿನ ಎಂಪಿ ಶಂಕರ್ ನೆನಪಾಗಿದ್ದಾನೆ, "ಅಬ್ಬ! ಎಂತ ಸ್ಟೈಲು ಅವಂದು!" ಎಂದುಕೊಳ್ಳುತ್ತ ತಾನು ಅವನಹಾಗೆ ಉಫ್ ಎಂದು ರೈಲೆಂಜಿನ್ನಿನೋಪಾದಿಯಲ್ಲಿ ಹೊಗೆಯುಗುಳಿದ. ಗೀರಿಬಿಸಾಕಿದ ಬೆಂಕಿಕಡ್ಡಿ ಇತ್ತ ಹುಲ್ಲುಕಟ್ಟೊಂದಕ್ಕೆ ಹೊಗೆ ಹುಟ್ಟಿಸಿದ್ದು ಇಬ್ಬರ ಅರಿವಿಗೆ ಬರುವಷ್ಟರಲ್ಲಿ ಅದು ಬೆಂಕಿಯಾಗಿ ಸಾಕಷ್ಟು ದೊಡ್ಡದು ಆಗಿಯಾಗಿತ್ತು. ಇನ್ನೆಲ್ಲಿಯ ಹುಲ್ಲು?! ಹೊತ್ತಿಕೊಂಡಿದ್ದ ಬೆಂಕಿಯನ್ನಾದರೂ ಆರಿಸೋಣವೆಂದರೆ ಹತ್ತಿರದಲ್ಲೆಲ್ಲು ನೀರೂ ಸಿಗುವಂತಿರಲಿಲ್ಲ. ತಡಮಾಡಿದರೆ ಸಿಕ್ಕಿಬೀಳುವೆವೆಂಬ ಅರಿವು ಬಂದದ್ದೇ ತಡ, ಎದ್ದು ಬಿದ್ದು ಓಡಿದ್ದರು ಇಬ್ಬರೂ. ಅರ್ಧ ದಾರಿ ಕಳೆದಮೇಲೆ ತನಗೆ ಬಂದಿದ್ದ ಸಿಟ್ಟನ್ನೆಲ್ಲ ಹೊರಹಾಕತೊಡಗಿದ ಮಾರುತಿ. "ಅಲ್ಲ ನಿನಗೆ ಅದೇ ಟೈಮಿಗೆ ಬೀಡಿ ಸೇದುವ ಚಟ ಬಂದೋಯ್ತಾ? ಬೋಳಿಮಗನೆ ನಿನ್ ಕರ್ಕಬರುಕಿಂತ ಮದ್ಲೆ ನಂಗ್ ಗುತ್ತಿತ್ತು ಹೀಂಗಾಗ್ತದೆ ಹೇಳಿ. ಪುಕ್ಸಟ್ಟೆ ನಿನಗೆ ಸಿಕ್ತಿದ್ದ ಒಂದ್ ಇಪ್ಪತ್ ಕಟ್ಟನ್ನೂ ತಪ್ಸ್ಕಂಡೆ. ಸತ್ ಹಾಳಾಗೋಗು!". ಫರ್ನಾಂಡೀಸನಿಗೆ ಈಗಲೂ ತಾನು ಅಂಥ ತಪ್ಪು ಮಾಡಿದ್ದೇನು ಎಂದು ತಿಳಿಯುತ್ತಿರಲಿಲ್ಲ.
            ಬೆಂಕಿ ದೊಡ್ಡದಾಗಿ ಹೊಗೆಯ ವಾಸನೆ ಹರಡುತ್ತಿದ್ದಂತೆ ರಾಮ ಹೆಗಡೇರಿಗೆ ಎಚ್ಚರವಾಯಿತು. ತಕ್ಷಣ ಬ್ಯಾಟರಿ ಹಿಡಿದು ಹೊರಗೋಡಿದ ಅವರಿಗೆ ಇದು ಹುಲ್ಲುರಾಶಿಗೆ ಬಿದ್ದ ಬೆಂಕಿಯೇ ಹೌದೆಂದು ಖಾತ್ರಿಯಾಗಿಬಿಟ್ಟಿತ್ತು. ಗಡಿಬಿಡಿಯಲ್ಲಿ ದಣಪೆ ದಾಟುವಾಗ ಕೋಲಿಗೆ ಸಿಕ್ಕಿಕೊಂಡ ಅವರ ಪಂಚೆಯ ತುದಿಯನ್ನು ಓಡಿಬಂದು ಬಿಡಿಸಿಕೊಟ್ಟ ಕೆಳಗಿನಮನೆಯ ಗೋವಿಂದ ನಡೆದ ಘಟನೆಯ ಸ್ಥೂಲ ವಿವರಣೆ ಕೊಟ್ಟ. ಹುಲ್ಲು ಆಗಲೂ ಪೂರ್ತಿಯಾಗಿ ಉರಿದುಹೋಗಿರಲಿಲ್ಲ. ಆದರದು ಹುಲ್ಲು, ನೀರೆರಚಿ ನಂದಿಸಿದರೆ ಒದ್ದೆಯಾಗಿ ಯಾವುದೆ ಉಪಯೋಗಕ್ಕೆ ಬರದೆ ಹಾಳಾಗುವುದು ಖಚಿತ. ಹಾಗಾಗಿ ಎಲ್ಲರೂ ಮೂಕರಾಗಿ ನಿಂತು ಬೆಂಕಿ ಹುಲ್ಲಿನ ಕೊನೆಯ ಕಡ್ಡಿಯನ್ನೂ ಬಿಡದೆ ಕಬಳಿಸಿದ್ದನ್ನು ನೋಡಿದರು. ಹೆಗಡೇರು ಉಳಿದವರು ಸಾಂತ್ವನದಿಂದ, ಸಿಟ್ಟಿನಿಂದ, ಪ್ರಾಮಾಣಿಕವಾಗಿ, ಹಚ್ಚಿಕೊಡಲು, ಮುಂತಾದ ಕಾರಣಗಳಿಗೆ ಹೇಳಿದ ಮಾತುಗಳನ್ನು ಕೇಳಿದರೇ ಹೊರತು ತಾವು ಒಂದೇ ಒಂದು ಮಾತನ್ನೂ ಆಡಲಿಲ್ಲ. ಎಲ್ಲ ಮುಗಿದಮೇಲೆ ಹೆಗಲಮೇಲಿನ ಪಂಚೆಯನ್ನೊಮ್ಮೆ ಕೊಡವಿ ರಪರಪನೆ ಮನೆಯತ್ತ ನಡೆದರು.
            "ಎಲ್ಲ ಆ ಸಾಮದ್ರೋಹಿ ಪರಮೇಶ್ವರ ಹೆಗಡೆಯದೇ ಕೆಲಸ. ಗುತ್ತಿದ್ದು ನನಗೆ. ಸತ್ತವ ಎಂತ ಆಯ್ದು ನೋಡುಲೂ ಬಂದ್ನಿಲ್ಲೆ. ದ್ವೇಷ ತೀರಿಸಿಕೊಳ್ಳೂದಕ್ಕೂ ಒಂದ್ ಹದ ಇರ್ತು. ನಾಳೆ ಬೆಳಿಗ್ಗೆ ಆಗ್ಲಿ ಯಾವುದಕ್ಕೂ!", ಸಿಟ್ಟಿನಲ್ಲಿ ಅಸಂಬದ್ಧ ಪ್ರಶ್ನೆ ಕೇಳಿದ ಪಾರ್ವತಿಗೆ ಎರಡು ತಪರಾಕಿಯನ್ನೂ ಬಿಗಿದಿದ್ದರು ಹೆಗಡೇರು. ಇಡೀ ರಾತ್ರಿ ಒಂದರ ಮೇಲೊಂದು ಕವಳ ಹಾಕಿಕೊಂಡೇ ಕಳೆದಿದ್ದರು. ಸೂರ್ಯ ಮೂಡುವುದಕ್ಕಿಂತ ಮುಂಚೆಯೇ ದಿಕ್ಕಿಗೊಂದೊಂದು ಚೂರಿನಂತಿದ್ದ ತೋಟಗಳನ್ನೆಲ್ಲ ಒಂದು ಸುತ್ತು ಹಾಕಿ ಬಂದಿದ್ದರು. "ಇದಕ್ಕೆ ಚಾ ಹೇಳಿ ಕರಿತ್ವ? ಅಕ್ಕಚ್ಚು ಇದು!" ಎಂದು ಒಂದಿಡೀ ಚೊಂಬು ಚಹವನ್ನು  ಕೊಟ್ಟಿಗೆಯ ಮರಿಗೆಗೆ ಹೊಯ್ದು ಪಾರ್ವತಿಗು ಇಲ್ಲದಂತೆ ಮಾಡಿದರು. ಒಂದಿಷ್ಟು ಹುಲ್ಲು ಸುಟ್ಟುಹೋಗಿದ್ದಕ್ಕೆ ಇಷ್ಟೆಲ್ಲ ಕುಣಿದಾಡುವ ಅವಶ್ಯಕತೆಯಿಲ್ಲವಾಗಿತ್ತು ಎಂದು ಹೇಳುವ ಮನಸ್ಸು ಆಕೆಗಾಗಿತ್ತಾದರೂ ಹೊಡೆತಕ್ಕೆ ಹೆದರಿ ಸುಮ್ಮನಾಗಿದ್ದಳು. ಹೆಗಡೇರಿಗೆ ದಿನಚರಿಯ ಎಲ್ಲ ಕೆಲಸಗಳಲ್ಲೂ ಅಂದೇಕೋ ವಿಶೇಷ ಹುಮ್ಮಸ್ಸು ಬಂದಂತಿತ್ತು. ಎರಡು ಬಾರಿ ಸೊಪ್ಪಿನ ಹೊರೆ ತಂದರು. ಸುದೀರ್ಘವಾಗಿ ದೇವರ ಪೂಜೆಗೈದರು. ಮಧ್ಯಾಹ್ನದ ನಿದ್ರೆಯಲ್ಲೂ ಅವರಿಗೆ ತಾನು ರಾತ್ರಿ ಮಾಡಲಿರುವ ಕೆಲಸದ ಕನಸು ಬಿದ್ದಿತ್ತು.
            ಪರಮೇಶ್ವರ ಹೆಗಡೇರು ಎಂದರೆ ಸಾಮಾನ್ಯರಲ್ಲ. ಪ್ರಸಕ್ತ ಸಾಲಿನ ಪಂಚಾಯ್ತಿ ಛೇರ್ಮನ್ ಅವರು. ಅದೂ ಸುಮ್ಮನೇ ಛೇರ್ಮನ್ ಆದವರೇ? ಹಿಂದಿನ ಸಾಲಿನಲ್ಲಿ ಛೇರ್ಮನ್ ಆಗಿದ್ದ ರಾಮ ಹಗಡೇರನ್ನು ಬಹುಮತದಿಂದ ಸೋಲಿಸಿ ಕುರ್ಚಿಯೇರಿದವರು. ಜನಾನುರಾಗಿ ಹಾಗು ನಿಷ್ಠರಾದ ರಾಮ ಹೆಗಡೇರು ಚುನಾವಣೆಯಲ್ಲಿ ಸೋಲಲು ಇತರೇಪೈಕಿಯವರಿಗೆಲ್ಲ ಪರಮೇಶ್ವರ ಹೆಗಡೇರು ಗೋವಾದಿಂದ ಬಾಟಲಿ ಸಾರಾಯಿ ತಂದು ಹಂಚಿದ್ದೇ ಕಾರಣ ಎಂದು ಒಂದಿಷ್ಟು ಜನ ಮಾತಾಡಿಕೊಂಡಿದ್ದರು. ಈ ಎರಡು ಹೆಗಡೇರ ಮನೆಗಳು ತಲೆತಲಾಂತರಗಳಿಂದ ದ್ವೇಷವನ್ನು ಸಾಕಿ ಬೆಳೆಸಿಕೊಂಡು ಬಂದಿದ್ದವು. ಗೋಪಾಲ ಊರಲ್ಲಿದ್ದು ಪೀಯೂಸಿ ಮಾಡುತ್ತಿದ್ದ ಸಮಯದಲ್ಲಿ ಪರಮೇಶ್ವರ ಹೆಗಡೇರ ಎರಡನೆ ಮಗಳು ಜಾನಕಿಯನ್ನು ಲವ್ ಮಾಡಿ ಮುಂದೆ ಹೇಳದೆ ಕೇಳದೆ ಬೆಂಗಳೂರಿಗೆ ಓಡಿ ಹೋಗಿದ್ದು, ಆಮೇಲೆ ಜಾನಕಿ ಮನೆಮುಂದಿನ ಬಾವಿ ಹಾರಿ ಕಾಲು ಮುರಿದುಕೊಂಡು ಕುಳಿತಿದ್ದು ಈ ದ್ವೇಷ ಇನ್ನಷ್ಟು ಬೆಳೆಯಲು ಕಾರಣವಾಗಿತ್ತು. ಆದ್ದರಿಂದಲೇ ರಾಮ ಹೆಗಡೇರಿಗೆ ಈ ಹುಲ್ಲು ಸುಡುವ ಕಂತ್ರಿ ಕೆಲಸ ಮಾಡಿದ್ದು ಅದೇ ಠಕ್ಕ ಪರಮೇಶ್ವರ ಎಂದು ಥಟ್ಟನೆ ಅನುಮಾನ ಬಂದಿದ್ದು.
            ದಿನವೊಂದು ಸದ್ದಿಲ್ಲದೆ ವೇಷ ಕಳಚಿತು. ರಾತ್ರಿ ಊಟ ಮಾಡುತ್ತಿರುವಾಗ ಪಾರ್ವತಿಯ ಬಳಿ ಕೇಳಿದರು ರಾಮ ಹೆಗಡೇರು, "ಬಚ್ಚಲ ಮಾಡಿನ ದಬ್ಬೆ ಲಡ್ಡಾಯ್ದು ಅಲ್ದಾ?", "ಎಂತದು? ಹಿತ್ತಲಲ್ಲಿ ಹಾವು ಕಂಡಿತಾ?" ಕೇಳಿದಳು ಪಾರ್ವತಿ. "ಥತ್ತೆರಿಕೆ, ನಿನ್ನ ಹತ್ತಿರ ಕೇಳಿದೆನಲ್ಲ, ನನ್ನ ಮೊಕಕ್ಕೆ ನಾನೆ ಸಗಣಿ ಬಡಿದುಕೊಂಡ ಹಾಗೆ!" ಶಪಿಸಿಕೊಂಡ ಹೆಗಡೇರು ಧ್ವನಿ ಎತ್ತರಿಸಿ "ಹನಿ ಉಪ್ಪು ಹಾಕು!" ಎಂದು ಕೂಗಿದರು. ಊಟ ಮುಗಿಸಿ ಕೈತೊಳೆದದ್ದೇ ಬ್ಯಾಟರಿ ಹಿಡಿದು ಬಚ್ಚಲುಮನೆಗೆ ಹೋಗಿ ದಬ್ಬೆಗಳಿಗೆಲ್ಲ ಒರಲೆ ಹಿಡಿದಿರುವುದನ್ನು ಖಾತ್ರಿಪಡಿಸಿಕೊಂಡು "ಇಲ್ಲೆ ಆಚೆ ಹೋಗಿಬರ್ತೆ, ನೀ ಮನಿಕ ದೀಪ ಬಂದ್ ಮಾಡ್ಕಂಡಿ." ಎಂದು ಹಳೇ ರಬ್ಬರು ಚಪ್ಪಲಿ ಮೆಟ್ಟಿ ಬಲಗೈಲಿ ಕತ್ತಿ ಎಡಗೈಲಿ ಬ್ಯಾಟರಿ ಹಿಡಿದು ಹೊರಟುಬಿಟ್ಟರು. ಪಾರ್ವತಿ ಅಡುಗೆಮನೆಯಿಂದ ಹೊರಬಂದು ಏನೆಂದು ಕೇಳುವಷ್ಟರಲ್ಲಿ ಅವರು ಮನೆಯ ಹತ್ತಿರವೆಲ್ಲೂ ಇರಲಿಲ್ಲ. "ಹಡಬೆಗೆ ಹುಟ್ಟಿದವನಿಗೆ ಅವನ ತೋಟದಿಂದಲೆ ನಾಲ್ಕು ಹಸೀ ಅಡಿಕೆಮರ ಕಡಿದುಬಿಸಾಕಿದರೆ ನಾ ಎಂಥವ ಗುತ್ತಾಗ್ತು", ತನಗೆ ತಾನೆ ಹೇಳಿಕೊಳ್ಳುತ್ತ ದೇವಸ್ಥಾನ ಕಳೆದು ತಮ್ಮ ತೋಟದ ಮೂಲಕವಾಗಿ ಪರಮೇಶ್ವರ ಹೆಗಡೆಯ ತೋಟದ ದಣಪೆ ದಾಟುವಾಗ "ಎಂತದೋ ಕಚ್ಚಿದಹಾಗಾಯ್ತಲ್ಲ!"
            ಮಾರನೆ ದಿನ ಬೆಳಿಗ್ಗೆ ಹೊಳೆಬದಿಯಲ್ಲಿ ಶೌಚಕಾರ್ಯವನ್ನು ಮುಗಿಸಿ ಚಡ್ಡಿಯ ಮೇಲೆ ಉಟ್ಟಿದ್ದ ಹರಕು ಪಂಚೆಯನ್ನು ತಲೆಗೆ ಚಂಡಿಕಟ್ಟಿ "ನವಿಲು ಕೊನಿಯುತಿದೆ....." ಎಂದು ರಾಗವಾಗಿ ಎಂಬಂತೆ ಹಾಡಿಕೊಳ್ಳುತ್ತ ಯಾರದಾದರೂ ತೋಟದ ಅಡಿಕೆಯನ್ನು ಹೆಕ್ಕಿಕೊಂಡು ಹೋಗುವ ಆಲೊಚನೆಯೊಡನೆ ಬೇಲಿ ಹಾರಿದ ಗೌಡರಕೇರಿಯ ನಾಗುವಿಗೆ ಅಡಿಕೆಮರವೊಂದಕ್ಕೆ ತಾಡಿಕೊಂಡಂತೆ ಕುಳಿತಿದ್ದ ರಾಮ ಹೆಗಡೇರು ಕಾಣಿಸಿದರು. ಇವರೇಕೆ ಇಲ್ಲಿ ಬಂದರು, ಬಂದವರು ಇಲ್ಲೆ ನಿದ್ರೆ ಮಾಡಿದ್ದೇಕೆ ಎಂದುಕೊಳ್ಳುತ್ತ ಅವರನ್ನು ಸಮೀಪಿಸಿ "ಹ್ವಾಯ್ ವಡಿದೀರು, ಹ್ವಾಯ್..." ಎಂದು ಕರೆದ. ಹೆಗಡೇರು ಹೂಂ ಹಾಂ ಇಲ್ಲದೆ ಬಿದ್ದಿದ್ದಾರೆ! ಇನ್ನೂ ಹತ್ತಿರ ಹೋಗಿ ಕರೆದು ನೋಡಿದ. ಉತ್ತರವಿಲ್ಲ. ಈಗ ನಾಗುವಿಗೆ ಸಂಶಯದ ಜೊತೆ ಹೆದರಿಕೆ ಶುರುವಾಯಿತು. ಒಮ್ಮೆ ಮೆಲುವಾಗಿ ಮುಟ್ಟಿದ. ತುಸು ವಾಲಿದ ಹೆಗಡೇರ ದೇಹ ಹಾಗೇ ಹಸಿಜಡ್ಡಿನ ಮೇಲೆ ವರಗಿಕೊಂಡಿತು. ಹಾಗಾದರೆ ಹೆಗಡೇರು ಸತ್ತದ್ದೇ ಹೌದೆ? ಹೌದು, ಮೂಗಿನಲ್ಲಿ ಗಾಳಿಯ ಸಂಚಾರವೆ ಇಲ್ಲ, ಬಾಯಿ ಅರ್ಧ ತೆರೆದಿದೆ, ಮತ್ತು ಬೆರಳುಗಳು ಸೆಟೆದುಕೊಂಡಿವೆ.