Sunday 15 April 2012

ಕವನ

ಬರೆಯಲು ಶುರುಮಾಡಿದ ಮೇಲೆ ಕಥೆ ಬೇರೆ ಅಲ್ಲ ಕವನ ಬೇರೆ ಅಲ್ಲ ಎಂಬುದು ನನ್ನ ಅಭಿಪ್ರಾಯ. ಇತ್ತೀಚಿಗೆ ರಚಿಸಿದ ಕವನವೊಂದು ನಿಮ್ಮ ಮುಂದಿದೆ.


ನೀ ಹೋದ ನಂತರದ ನಾನು 


ಅದೋ,
ಕಿಟಕಿಯಾಚೆಯಿಂದ ಕೇಳಿದೆ
ಒಳಬಂದು ತೊಯ್ಯಿಸಲೇ ಎಂದು
ಕಾಯಿಸಿ ಸುರಿದ ಮೊದಲ ಮಳೆ
ಮುಸುಕು ತೆಗೆದೆದ್ದ ಭಾವನೆಗಳೆಲ್ಲ
ಈಗ ವೇಷಕಟ್ಟಿ ಮೂರ್ತ
ಸ್ವಗತದಲ್ಲೆ ಸಂಭಾಷಿಸಿ
ನನ್ನಿಡಲೇಕೆ ದೂರ?
ನಿನ್ನ ಮೌನವನ್ನೂ
ಆಲಿಸಬಲ್ಲೆ ನಾನು


ನೀನಿಟ್ಟ ಹೆಜ್ಜೆಯಡಿಯ ಮರಳಲ್ಲಿ
ಮನೆಯೊಂದ ಕಟ್ಟಿ
ಬದುಕಲು ಕರೆದಿದ್ದೆ ನಿನ್ನ
ಆದರೆ ನೀ ಬರುವ ಮೊದಲೇ
ಮತ್ತೆ ಮಳೆ ಬಂದುಬಿಟ್ಟಿತು

ಮನದ ಮರೆಯಲಿ ಅವಿತೆ
ಕಣ್ಣು ರಚಿಸಿದ ಕವಿತೆ
ನಿನ್ನೆದುರು ಓದುವಷ್ಟರಲ್ಲಿ
ತಾನೇ ಕಣ್ಣೀರಾಗಿ ಧರೆಗಿಳಿಯಿತು

ನನ್ನ ಬಾಗಿಲಾಚೆಯ
ನನ್ನದಲ್ಲದ ಜಗತ್ತು
ನಿನ್ನದೂ ಅಲ್ಲವೆಂಬ ಸತ್ಯ
ಹುಡುಗೀ,
ನಿನಗೇಕೆ ತಿಳಿಯಲಿಲ್ಲ? 

No comments:

Post a Comment